ಬುಧವಾರ, ಫೆಬ್ರವರಿ 6, 2013

"ಸಹಬಾಳ್ವೆ - ಸಿಹಿಬಾಳ್ವೆ"


ಇಂದೇಕೋ ಕುವೆಂಪು ಬಹಳವಾಗಿ ಕಾಡುತ್ತಿದ್ದಾರೆ.
 ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!


 "ಮನುಜ ಮತ ವಿಶ್ವಪಥ" ಎಂದು ಜಗತ್ತಿಗೆ ಸಾರಿಹೇಳಿದ ಆ ಹಿರಿಯ ಜೀವಕ್ಕೆ ನಮೋನ್ನಮಃ. ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಾ, ತಮ್ಮ ಪಾಡಿಗೆ ತಾವಿರುವ ಜನರನ್ನು ಉದ್ರಿಕ್ತಗೊಳಿಸಿ ಅವರನ್ನು ಮುಂದೆ ಬಿಟ್ಟು ಹಿಂದೆ ನಿಂತು ತಮಾಷೆ ನೋಡುವ ಓವೈಸಿ, ತೊಗಾಡಿಯ, ಮುತಾಲಿಕ್ ರಂತಹ ಮತಾಂಧರಿಗೆ ಇಂದು ಕುವೆಂಪುರವರ ಈ ವಿಶ್ವಮಾನವ ಸಂದೇಶವನ್ನು ಅರ್ಥಮಾಡಿಸಬೇಕಿದೆ. ಇಲ್ಲದಿದ್ದರೆ ಇಂತಹ ಮತ್ತಷ್ಟು ವಿಷಜಂತುಗಳು ಹುಟ್ಟಿಕೊಂಡು ಸಮಾಜದ ನೆಮ್ಮದಿಯನ್ನು ಹಾಳುಗೆಡವುತ್ತವೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ
 ಕಲ್ಲು ಮಣ್ಣುಗಳ ಗುಡಿಯೊಳಗೆ
 ಇಲ್ಲೇ ಇರುವ ಪ್ರೀತಿ ಸ್ನೇಹಗಳ
 ಗುರುತಿಸದಾದೆವು ನಮ್ಮೊಳಗೆ



ಎಂಬ ಕವಿ ಗೋಪಾಲಕೃಷ್ಣ ಅಡಿಗರ ಆಶಯದಂತೆ ಬದುಕೋಣ. "ಸಹಬಾಳ್ವೆ - ಸಿಹಿಬಾಳ್ವೆ" ಎಂದು ಜಗತ್ತಿಗೆ ಸಾರಿಹೇಳೋಣ

ಶನಿವಾರ, ಜನವರಿ 5, 2013

ಹೆಸರ ಹಂಗಿಲ್ಲದ ಹನಿಗಳು

ಗೆದ್ದವನು ಏದುಸಿರು ಬಿಟ್ಟ
ಸೋತವನು ನಿಟ್ಟುಸಿರ ಬಿಟ್ಟ
ಬಿಟ್ಟದ್ದು ಉಸಿರೇ ಆದರೂ
ಎಷ್ಟೊಂದು ಭಿನ್ನ - ಬದುಕಿನ ದಾರಿ ವಿಭಿನ್ನ


>>>>>>>>>>>>>>>>>>>>>>>>>>>>>>>>>>>

"ಕರುಣಾಳುಗಳ ಬೀಡು ನಮ್ಮ ಕನ್ನಡ ನಾಡು
ಶಾಂತಿ-ಸೌಹಾರ್ದತೆಯು ತುಂಬಿ ತುಳುಕಿದೆ ನೋಡು
ಚೆಲುವು-ಒಲವುಗಳ ದಿವ್ಯ ಸಮ್ಮಿಲನ
ಜನುಮ ಜನುಮವೂ ಸಿಗಲಿ ನನಗಿಲ್ಲಿ ಜನನ






>>>>>>>>>>>>>>>>>>>>>>


ನಲ್ಲೆ ನಿನ್ನ ಪ್ರೀತಿಯ ನದಿಯಲ್ಲಿ
ಎಷ್ಟು ಮಿಂದರೂ ಸಾಲದು
ಶೀತ, ನೆಗಡಿ ಯಾವುದೇ ವ್ಯಾಧಿ
ಸನಿಹಕ್ಕೂ ಬಾರದು

  
>>>>>>>>>>>>>>>>>>>>>>>>>>>>>>>>>>>>

ನಿಮ್ಮ ಮನೆಯ ಎಲ್ಲರೂ
ಬಹಳ ಒಳ್ಳೆಯವರು....ನಿಮ್ಮದು Sweet HomeU
ಹೌದು ಸ್ವಾಮೀ ನಮ್ಮದು Sweet HomeU
ನಮ್ಮ ಮನೆಯಲ್ಲಿ ಎಲ್ಲರಿಗೂ ಡಯಾಬಿಟೀಸ್  ProblemmU !! :)


>>>>>>>>>>>>>>>>>>>>>

ಆಫೀಸಿಗೆ ಹೊರಟಿದ್ದ ಗಂಡ
ಹೆಂಡತಿಗೆ ಕೇಳಿದ "ಕೊಡೆ" ಕೊಡೆ
ಅಯ್ಯೋ ಬೆಳ್ಳಂ ಬೆಳಿಗ್ಗೆ ಹಾಗೆಲ್ಲ
ಕೇಳದಿರಿ ನಾನು ಕೊಡೆ

ನಾನು ಕೇಳಿದ್ದು ನಿನ್ನ
ಸಿಹಿಮುತ್ತನ್ನಲ್ಲ ಕಣೆ
ಮಳೆ ಬರೋಹಾಗಿದೆ
umbrella ಕೊಡೆ


>>>>>>>>>>>>>>>>>>>>>>>>>>>>>>>>>>>>>>>

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ
ಕುಡಿಯುವುದಂತೂ ಖಾತ್ರಿ
ಅವನು ದಿನವೆಲ್ಲಾ ಕುಡಿದು ಆಗುತ್ತಾನೆ ಟೈಟ್
"ಗುಂಡ್"ಮಾರ್ನಿಂಗ್, "ಗುಂಡ್"ಆಫ್ಟರ್ ನೂನ್, "ಗುಂಡ್"ನೈಟ್


>>>>>>>>>>>>>>>>>>>>>> 
 

ಶುಕ್ರವಾರ, ಸೆಪ್ಟೆಂಬರ್ 7, 2012

ಬೆಳದಿಂಗಳ ಅಂಗಳದಲ್ಲಿ ........

ಭುವಿಯ ಬೆಳಗಲು ಅನುದಿನವೂ 
ಸೂರ್ಯ - ಚಂದ್ರರ ಜುಗಲ್ ಬಂದಿ
ಇಂದು ಹಗಲೆಲ್ಲ ಸೂರ್ಯನ ಸುಳಿವಿಲ್ಲ 
ಮೋಡಗಳ ಮರೆಯಲ್ಲಿ ಅವಿತಿದ್ದ 


ಚಂದ್ರನಿಗಂತೂ ಇಂದು ಬರುವ 
ಜರೂರತ್ತಿಲ್ಲ
ಅಮಾವಾಸ್ಯೆಯ ಇರುಳು 
ಕರೆದರೂ ಬರಲೊಲ್ಲ 


ನಲ್ಲೆ ನೀ ಬಳಿಯಿರಲು 
ಸೂರ್ಯ ಬಾರದಿದ್ದರೂ ಎನಗಿಲ್ಲ ಚಿಂತೆ 
ಚಂದಿರ ಬಾರದಿರೆ ಏನಂತೆ 
ಅಮಾವಾಸ್ಯೆಯ ಇರುಳೂ ಹಾಲು ಹುಣ್ಣಿಮೆಯಂತೆ 

ಬುಧವಾರ, ಮೇ 30, 2012

ನಲ್ಲೆಗಾಗಿ - ನಲ್ಮೆಯಿಂದ


..................................................................................................................




ನೀ ಹೊಸೆಯಲೆಂದು ಹೊಸ ಕವಿತೆ 
ನಲ್ಲೆ ನಾ ನಿನ್ನ ಬಳಿಯಲ್ಲೇ ಕುಳಿತೆ 
ನೀ ಬರೆಯಲಿಲ್ಲ ಒಂದೂ ಸಾಲು 
ದೂರಾದೆ - ಈಗ ಕವಿತೆಗಳ ಸಾಲು ಸಾಲು 


...................................................................................................................

ನಿನ್ನ ಮೊಗದಲ್ಲಿ ಅರಳಿದ 
ಹೂನಗೆಯ ಕಂಡಾಗ 
ಆ ಚೆಲುವ ನೋಡಿ
ಮಲ್ಲಿಗೆಯೂ ನಾಚಿಕೊಂಡಾಗ 
ನಾ ಜಗವ ಮರೆತೆ 

...................................................................................................................


ನಲ್ಲೆ ನನ್ನ ತೋಳ್ತೆಕ್ಕೆಯಲ್ಲಿ


ನೀ ಬಂಧಿಯಾದ ಕ್ಷಣ

ಜಗದ ಪಾಲಿಗೆ ನಾ

ಕಿವುಡ - ಮೂಗ - ಕುರುಡ


.....................................................................................................



 

ಮಂಗಳವಾರ, ಫೆಬ್ರವರಿ 28, 2012

ಯಮನ ಜೊತೆ ಫಿಕ್ಸಿಂಗು

ಅವನು: ನಿನ್ನೆ ರಾತ್ರಿ ಕನಸಿನಲ್ಲಿ ನೀನು ಸತ್ತುಹೋಗಿದ್ದೆ
ನಾನು: ಹೌದಾ!!?? ಸತ್ತೇ ಇಲ್ವಲ್ಲ ಬಡ್ಡಿಮಗ ಅಂತ ಬೇಜಾರೆನೋ ತಮಗೆ
ಅವನು: ಇಲ್ಲ ಕಣೋ ನಿಜವಾಗಲೂ ಥರ ಕನಸು ಬಿದ್ದಿತ್ತು
ನಾನು: ನೀನು "ಜೋಗಿ" ಸ್ಟೈಲಲ್ಲಿ ನನ್ ಹೆಣದ ಮುಂದೆ ಡ್ಯಾನ್ಸ್ ಮಾಡ್ತಿದ್ಯಾ? ಅಲ್ಲ ಕಣೋ ನಾನೇನೋ ಸಾವು ಅನ್ನೋ        ವಿಷಯದ ಬಗ್ಗೆ ಒಂದು ಕವನ ಗೀಚಿದ್ರೆ ನೀನು ನನ್ನ ಸಾವಿಗೆ ಸ್ಕೆಚ್ ಹಾಕ್ತಿಯಲ್ಲೋ ಸುಂದರಾಂಗ.

ಹೀಗೇ ಸಾಗಿತ್ತು ನನ್ನ ಹಾಗೂ ನನ್ನ ಕಸಿನ್ ನರಸಿಂಹನ್ ಚಾಟಿಂಗು ಕೆಲವು ದಿನಗಳ ಹಿಂದೆ. ಅವ್ನು ಅಲ್ಲೆಲ್ಲೋ ದೂರದಲ್ಲಿ ಡೆನ್ಮಾರ್ಕಿನ ಕೋಪನ್ ಹೇಗನ್ನಲ್ಲಿ ಕುಳಿತು ನನ್ ಜೊತೆ ಹರಟುತ್ತಿದ್ದ. ಸಾವಿನ ಕುರಿತು ನಮ್ಮ ಚರ್ಚೆ ಹೀಗೆ ಹಾಸ್ಯಮಯವಾಗಿ ಸಾಗಿತ್ತು. ಅಷ್ಟರಲ್ಲಿ ಅವನು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆದ. ಅಲ್ಲಿಗೆ ನಮ್ಮ ಚಾಟ್-ಚಟಕ್ಕೆ ಬ್ರೇಕ್ ಬಿತ್ತು.

ಎಪಿಸೋಡ್ ಇಲ್ಲಿಗೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಸಾವು ಅನ್ನುವ ಸಬ್ಜೆಕ್ಟು ಅಷ್ಟು ಸುಲಭವಾಗಿ ಮರೆಯಾಗುವ ವಿಷಯ ಅಲ್ಲ. ಬಿಟ್ಟೆನೆಂದರೂ ಬಿಡದೇ ಕಾಡುವ ಮಾಯೆ ಸಾವು. ನಾವು ಸಾಮಾನ್ಯವಾಗಿ ಎಲ್ಲರ ಮನೇಲೂ ದಿನ ನೋಡ್ತಾನೆ ಇರ್ತೀವಿ, ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಅಥವಾ ಅಪ್ಪ/ಅಮ್ಮ ಮಗನಿಗೆ ಹೀಗೆ ತುಂಬಾ ಹತ್ತಿರದವರೇ ಎಲ್ಲಾದರು ಹೋಗಿ ಸಾಯಿ ಅಂತಾನೋ ಸತ್ತಾದರೂ ಹೋಗು ಅಂತಾನೋ ಬೈತಿರ್ತಾರೆ. ನಿಜವಾಗಿಯು ಹಾಗೇನಾದ್ರೂ ಸತ್ತರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ. ತೀರಾ ಹತ್ತಿರದವರು ಸತ್ತಾಗ ಅದರ ನೋವು ಮರೆಯೋಕೆ ವರ್ಷಗಳೇ ಹಿಡಿಯುತ್ತವೆ.ಇದೇ ಥರ ಅವತ್ತೆಲ್ಲಾ ನನ್ನ ಮನಸ್ಸಿನ ತುಂಬಾ ಮನುಷ್ಯ ಎಂಬ ಪ್ರಾಣಿಯ ಪ್ರಾಣದ ಬಗ್ಗೆ ತರಹೇವಾರಿ ಯೋಚನೆಗಳು ಕಾಡಿದವು.

ಅರೆ ಇದೇನಿದು ಯಾರೋ ನನ್ನ ಕಡೆಗೆ ಬರ್ತಾ ಇದ್ದಾರಲ್ಲ....ಯಾಕೋ ಎಲ್ಲಾ ಮಸುಕು ಮಸುಕಾಗಿ ಕಾಣಿಸ್ತಾ ಇದೆ. ಅಯ್ಯೋ ದೇವರೇ ಏನಪ್ಪಾ ಇದು ಯಮರಾಜ ಬಂದೇ ಬಿಟ್ಟ ಅವನ ಅದೇ ಹಳೇ ಮಾಡಲ್ ಗಾಡಿ (ಕೋಣ) ಮೇಲೆ ಕೂತ್ಕೊಂಡು.

ಯಮರಾಜ: ಎಲೈ ಯುವಕ ನಡೆ ನಡೆ ಹೊರಡೋಣ...ನರಕಕ್ಕೆ
ನಾನು: ಅಲ್ಲಾ ಗುರುವೇ ನನಗೆ ಇವಾಗಿನ್ನು ಮೂವತ್ತು ವರ್ಷ ತುಂಬಿದೆ.... ಇನ್ನು ಆಯಸ್ಸು ಬಾಕಿ ಇದೆ. ಎಲ್ಲೋ ನಿಂಗೆ ಅಡ್ರಸ್ ತಪ್ಪಿ ಹೋಗಿದೆ. ಅದರಲ್ಲಿ ನಿಂದೇನೂ ತಪ್ಪಿಲ್ಲ ಬಿಡು ಬೆಂಗಳೂರು ತುಂಬಾ ಬೆಳೆದುಬಿಡ್ತು...ಕನಫ್ಯೂಸ್ ಆಗೋದು ಕಾಮನ್ನು.
ಯಮರಾಜ: ನಿನ್ನ ಹೆಸರು ವಿಜಯ್ ಅಲ್ಲವೇ, ನಾನು ಸರಿಯಾದ ವಿಳಾಸಕ್ಕೆ ಬಂದಿದ್ದೇನೆ. ನನ್ನನ್ನು "ದಾರಿ ತಪ್ಪಿದ ಮಗ" ಎಂದು ತಿಳಿದೆಯಾ ಮೂಢ!!
ನಾನು : ಇಲ್ಲಾ ಬಾಸು ಇದೇ ಬೀದೀಲಿ ಕೊನೆ ಮನೇಲಿ ಒಬ್ರು ವಿಜಿ ಅಂತ ಇದ್ದಾರೆ..ಲೇಡಿಸು....ನೋಡಕ್ಕೂ ಚೆನ್ನಾಗಿದ್ದಾರೆ ಬಾಸು, ನೀನು ಅವರನ್ನ ಹುಡುಕ್ತಾ ಇರ್ಬೇಕು.
ಯಮರಾಜ : ನೋಡು ನೀನು ನನ್ನ ಬಳಿ ಆಟ ಕಟ್ಟಬೇಡ ನಾನು ಬಂದಿರುವುದು ನಿನಗಾಗಿ, ಮಹಿಳೆಗಾಗಿ ಅಲ್ಲ.
ನಾನು : ಅಲ್ಲಾ ಗುರು ಒಸೀ ಯೋಚನೆ ಮಾಡು, ಇಂದ್ರ ಬಡ್ಡೀಮಗ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕೆ ಅಂತ ಸಿಕ್ ಸಿಕ್ಕಿದ ಸುಂದರಿಯರ್ನ ಸುತ್ತಾ ಮುತ್ತಾ ಸಾಕ್ಕಂಡಿರುವಾಗ ನೀನು ಒಂದೂ ಹುಡುಗಿ ಇಲ್ದೆ ಹೆಂಗಿದ್ಯಾ ಸ್ವಾಮೀ. ಈಗಲೂ ನಿನಗೇನು ಕಮ್ಮಿ ಹೇಳು...ಒಳ್ಳೆ ಕಟ್ಟುಮಸ್ತಾಗಿ ಪೈಲ್ವಾನ್ ಇದ್ದಂಗೆ ಇದ್ದೀಯ..
ಯಮರಾಜ: ಸಾಕು ಮಾಡು ನಿನ್ನ ಹೊಗಳಿಕೆಯ ಮಾತನ್ನು, ನಿನ್ನ ಹೊಗಳಿಕೆಯ ಮಾತಿಗೆ ನಾನು ಮರುಳಾಗಲಾರೆ
ನಾನು: ಬಾಸೂ ನಾನು ಹೇಳ್ತಾ ಇರೋದು ನಿಜ ಬಾಸು....ನೀನು ಒಳ್ಳೆ ಹೀರೋ ಥರ ಇದ್ದೀಯಾ ಬಾಸು...ನಿಂಗೆ ಒಂದು ಒಳ್ಳೆ ಐಡಿಯಾ ಕೊಡ್ತೀನಿ. ನನ್ ಬದ್ಲು ವಿಜೀನ ಕರ್ಕೊಂಡು ಹೋಗು ನಾನು ಇನ್ನೊಂದಷ್ಟು ವರ್ಷ ಆದಮೇಲೆ ನಿನ್ ಹತ್ರ ಬರ್ತೀನಿ.
ಯಮರಾಜ : ನೀನು ನನಗೆ ಓಲೈಸಿ ನಿನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡ..
ನಾನು : ಏನ್ ಗುರು ನೀನೂ ನನ್ನ ಅಪಾರ್ಥ ಮಾಡ್ಕೊಂಡು ಬಿಟ್ಟೆ ನನ್ನ. ನಂ ಆಫೀಸಲ್ಲೂ ಅಷ್ಟೇ ನಂ ಬಾಸೂ ನಿನ್ ಹಂಗೆ ನನ್ನ ಶ್ಯಾನೆ ತಪ್ಪು ತಿಳ್ಕಂಡವ್ರೆ .... ನಂಗೆ ನನ್ ಜೀವದ್ ಮೇಲೆ ಆಸೆ ಅಲ್ಲ ಅದು ನಿನ್ ಮೇಲಿರೋ ಅಭಿಮಾನ ಗುರೂ.....ನಂ ರಾಜ್ಕುಮಾರ್ ಅಣ್ಣನ್ನ ಬಿಟ್ರೆ ನಾನ್ ನಿನ್ನೆ ಲೈಕ್ ಮಾಡೋದು ಗುರು ದೇವರಾಣೆಗೂ.
ಯಮರಾಜ : ನಿನ್ನ ಹೊಗಳಿಕೆಯ ಗಾಳಕ್ಕೆ ನಾನು ಸಿಲುಕುವವನಲ್ಲ, ನಿನ್ನ ಜಾಣ್ಮೆಯನ್ನು ನನ್ನ ಮುಂದೆ ಪ್ರದರ್ಶಿಸಬೇಡ...
ನಾನು : (ಏನಪ್ಪಾ ಮಾಡೋದು ಪಾರ್ಟಿ ಯಾವುದಕ್ಕೂ ಜಗ್ತಾ ಇಲ್ಲ) ಅಲ್ಲಯ್ಯಾ ಯಮಧರ್ಮರಾಯ ನೀನೇನಾದ್ರೂ ನನಗೆ ಜೀವದಾನ ಮಾಡಿದರೆ ನಿನಗೆ ಭಾರೀ ಭರ್ಜರೀ ಉಡುಗೊರೆ ಕೊಡುತ್ತೇನೆ. ಸದ್ಯದಲ್ಲೇ ನಮ್ಮ ಕೇಂದ್ರ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿ ನಮ್ಮ ಭಾರತೀಯರು ತೊಡಗಿಸಿರೋ (ಅಡಗಿಸಿರೋ) ಕಪ್ಪುಹಣ ವಾಪಸ್ ತರ್ತಾರೆ. ಹಾಗೆ ಅವರು ತಂದು ಕೊಡೋ ದುಡ್ಡನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಂಚ್ತಾರೆ......ಆಗ ನಂಗೂ ಒಂದಷ್ಟು ಲಕ್ಷಾನೋ - ಕೋಟಿನೋ ಬರುತ್ತೆ ಅದೆಲ್ಲಾ ನಿಂಗೆ ಕೊಟ್ಬಿಡ್ತೀನಿ ಈಗ ಸದ್ಯಕ್ಕೆ ನನಗೆ ಪ್ರಾಣಭಿಕ್ಷೆ ಕೊಡು ಗುರುವೇ.....

ಯಮರಾಜ : ಅಯ್ಯೋ ..... ಗುರುವೇ ನಿಂಗೆ ಕೈಮುಗೀತೀನಿ ದಯವಿಟ್ಟು ನನ್ ಜೊತೆ ಬಾ ಈಗ.... ನಿಮ್ಮ ಸರ್ಕಾರದವ್ರು ಕಪ್ಪುಹಣ ವಾಪಸ್ ತರೋ ಹೊತ್ತಿಗೆ ನಾನು ಬದುಕಿರ್ತೀನೋ ಇಲ್ವೋ ನಂಗೇ ಗೊತ್ತಿಲ್ಲಾ....ಸುಮ್ನೆ ನಡೀ.......

ಯಮರಾಜ ಜೋರಾಗಿ ನನ್ ಕಡೆ ಹಗ್ಗ (ಯಮಪಾಶ) ಎಸೆದ ....... 

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>......................... 


ನಾನು ಕಣ್ಬಿಟ್ಟೆ ....... ಆಗ್ಲೇ ಬೆಳಿಗ್ಗೆ ಒಂಭತ್ತು ಘಂಟೆ...... ಆಫೀಸಿಗೆ ಟೈಮಾಯ್ತು...... ಬಾಸ್ ಹತ್ರ ಇವತ್ತೂ ಬೈಸ್ಕೊಬೇಕು ಛೇ !!!