ಮಂಗಳವಾರ, ಫೆಬ್ರವರಿ 28, 2012

ಯಮನ ಜೊತೆ ಫಿಕ್ಸಿಂಗು

ಅವನು: ನಿನ್ನೆ ರಾತ್ರಿ ಕನಸಿನಲ್ಲಿ ನೀನು ಸತ್ತುಹೋಗಿದ್ದೆ
ನಾನು: ಹೌದಾ!!?? ಸತ್ತೇ ಇಲ್ವಲ್ಲ ಬಡ್ಡಿಮಗ ಅಂತ ಬೇಜಾರೆನೋ ತಮಗೆ
ಅವನು: ಇಲ್ಲ ಕಣೋ ನಿಜವಾಗಲೂ ಥರ ಕನಸು ಬಿದ್ದಿತ್ತು
ನಾನು: ನೀನು "ಜೋಗಿ" ಸ್ಟೈಲಲ್ಲಿ ನನ್ ಹೆಣದ ಮುಂದೆ ಡ್ಯಾನ್ಸ್ ಮಾಡ್ತಿದ್ಯಾ? ಅಲ್ಲ ಕಣೋ ನಾನೇನೋ ಸಾವು ಅನ್ನೋ        ವಿಷಯದ ಬಗ್ಗೆ ಒಂದು ಕವನ ಗೀಚಿದ್ರೆ ನೀನು ನನ್ನ ಸಾವಿಗೆ ಸ್ಕೆಚ್ ಹಾಕ್ತಿಯಲ್ಲೋ ಸುಂದರಾಂಗ.

ಹೀಗೇ ಸಾಗಿತ್ತು ನನ್ನ ಹಾಗೂ ನನ್ನ ಕಸಿನ್ ನರಸಿಂಹನ್ ಚಾಟಿಂಗು ಕೆಲವು ದಿನಗಳ ಹಿಂದೆ. ಅವ್ನು ಅಲ್ಲೆಲ್ಲೋ ದೂರದಲ್ಲಿ ಡೆನ್ಮಾರ್ಕಿನ ಕೋಪನ್ ಹೇಗನ್ನಲ್ಲಿ ಕುಳಿತು ನನ್ ಜೊತೆ ಹರಟುತ್ತಿದ್ದ. ಸಾವಿನ ಕುರಿತು ನಮ್ಮ ಚರ್ಚೆ ಹೀಗೆ ಹಾಸ್ಯಮಯವಾಗಿ ಸಾಗಿತ್ತು. ಅಷ್ಟರಲ್ಲಿ ಅವನು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆದ. ಅಲ್ಲಿಗೆ ನಮ್ಮ ಚಾಟ್-ಚಟಕ್ಕೆ ಬ್ರೇಕ್ ಬಿತ್ತು.

ಎಪಿಸೋಡ್ ಇಲ್ಲಿಗೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಸಾವು ಅನ್ನುವ ಸಬ್ಜೆಕ್ಟು ಅಷ್ಟು ಸುಲಭವಾಗಿ ಮರೆಯಾಗುವ ವಿಷಯ ಅಲ್ಲ. ಬಿಟ್ಟೆನೆಂದರೂ ಬಿಡದೇ ಕಾಡುವ ಮಾಯೆ ಸಾವು. ನಾವು ಸಾಮಾನ್ಯವಾಗಿ ಎಲ್ಲರ ಮನೇಲೂ ದಿನ ನೋಡ್ತಾನೆ ಇರ್ತೀವಿ, ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಅಥವಾ ಅಪ್ಪ/ಅಮ್ಮ ಮಗನಿಗೆ ಹೀಗೆ ತುಂಬಾ ಹತ್ತಿರದವರೇ ಎಲ್ಲಾದರು ಹೋಗಿ ಸಾಯಿ ಅಂತಾನೋ ಸತ್ತಾದರೂ ಹೋಗು ಅಂತಾನೋ ಬೈತಿರ್ತಾರೆ. ನಿಜವಾಗಿಯು ಹಾಗೇನಾದ್ರೂ ಸತ್ತರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ. ತೀರಾ ಹತ್ತಿರದವರು ಸತ್ತಾಗ ಅದರ ನೋವು ಮರೆಯೋಕೆ ವರ್ಷಗಳೇ ಹಿಡಿಯುತ್ತವೆ.ಇದೇ ಥರ ಅವತ್ತೆಲ್ಲಾ ನನ್ನ ಮನಸ್ಸಿನ ತುಂಬಾ ಮನುಷ್ಯ ಎಂಬ ಪ್ರಾಣಿಯ ಪ್ರಾಣದ ಬಗ್ಗೆ ತರಹೇವಾರಿ ಯೋಚನೆಗಳು ಕಾಡಿದವು.

ಅರೆ ಇದೇನಿದು ಯಾರೋ ನನ್ನ ಕಡೆಗೆ ಬರ್ತಾ ಇದ್ದಾರಲ್ಲ....ಯಾಕೋ ಎಲ್ಲಾ ಮಸುಕು ಮಸುಕಾಗಿ ಕಾಣಿಸ್ತಾ ಇದೆ. ಅಯ್ಯೋ ದೇವರೇ ಏನಪ್ಪಾ ಇದು ಯಮರಾಜ ಬಂದೇ ಬಿಟ್ಟ ಅವನ ಅದೇ ಹಳೇ ಮಾಡಲ್ ಗಾಡಿ (ಕೋಣ) ಮೇಲೆ ಕೂತ್ಕೊಂಡು.

ಯಮರಾಜ: ಎಲೈ ಯುವಕ ನಡೆ ನಡೆ ಹೊರಡೋಣ...ನರಕಕ್ಕೆ
ನಾನು: ಅಲ್ಲಾ ಗುರುವೇ ನನಗೆ ಇವಾಗಿನ್ನು ಮೂವತ್ತು ವರ್ಷ ತುಂಬಿದೆ.... ಇನ್ನು ಆಯಸ್ಸು ಬಾಕಿ ಇದೆ. ಎಲ್ಲೋ ನಿಂಗೆ ಅಡ್ರಸ್ ತಪ್ಪಿ ಹೋಗಿದೆ. ಅದರಲ್ಲಿ ನಿಂದೇನೂ ತಪ್ಪಿಲ್ಲ ಬಿಡು ಬೆಂಗಳೂರು ತುಂಬಾ ಬೆಳೆದುಬಿಡ್ತು...ಕನಫ್ಯೂಸ್ ಆಗೋದು ಕಾಮನ್ನು.
ಯಮರಾಜ: ನಿನ್ನ ಹೆಸರು ವಿಜಯ್ ಅಲ್ಲವೇ, ನಾನು ಸರಿಯಾದ ವಿಳಾಸಕ್ಕೆ ಬಂದಿದ್ದೇನೆ. ನನ್ನನ್ನು "ದಾರಿ ತಪ್ಪಿದ ಮಗ" ಎಂದು ತಿಳಿದೆಯಾ ಮೂಢ!!
ನಾನು : ಇಲ್ಲಾ ಬಾಸು ಇದೇ ಬೀದೀಲಿ ಕೊನೆ ಮನೇಲಿ ಒಬ್ರು ವಿಜಿ ಅಂತ ಇದ್ದಾರೆ..ಲೇಡಿಸು....ನೋಡಕ್ಕೂ ಚೆನ್ನಾಗಿದ್ದಾರೆ ಬಾಸು, ನೀನು ಅವರನ್ನ ಹುಡುಕ್ತಾ ಇರ್ಬೇಕು.
ಯಮರಾಜ : ನೋಡು ನೀನು ನನ್ನ ಬಳಿ ಆಟ ಕಟ್ಟಬೇಡ ನಾನು ಬಂದಿರುವುದು ನಿನಗಾಗಿ, ಮಹಿಳೆಗಾಗಿ ಅಲ್ಲ.
ನಾನು : ಅಲ್ಲಾ ಗುರು ಒಸೀ ಯೋಚನೆ ಮಾಡು, ಇಂದ್ರ ಬಡ್ಡೀಮಗ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕೆ ಅಂತ ಸಿಕ್ ಸಿಕ್ಕಿದ ಸುಂದರಿಯರ್ನ ಸುತ್ತಾ ಮುತ್ತಾ ಸಾಕ್ಕಂಡಿರುವಾಗ ನೀನು ಒಂದೂ ಹುಡುಗಿ ಇಲ್ದೆ ಹೆಂಗಿದ್ಯಾ ಸ್ವಾಮೀ. ಈಗಲೂ ನಿನಗೇನು ಕಮ್ಮಿ ಹೇಳು...ಒಳ್ಳೆ ಕಟ್ಟುಮಸ್ತಾಗಿ ಪೈಲ್ವಾನ್ ಇದ್ದಂಗೆ ಇದ್ದೀಯ..
ಯಮರಾಜ: ಸಾಕು ಮಾಡು ನಿನ್ನ ಹೊಗಳಿಕೆಯ ಮಾತನ್ನು, ನಿನ್ನ ಹೊಗಳಿಕೆಯ ಮಾತಿಗೆ ನಾನು ಮರುಳಾಗಲಾರೆ
ನಾನು: ಬಾಸೂ ನಾನು ಹೇಳ್ತಾ ಇರೋದು ನಿಜ ಬಾಸು....ನೀನು ಒಳ್ಳೆ ಹೀರೋ ಥರ ಇದ್ದೀಯಾ ಬಾಸು...ನಿಂಗೆ ಒಂದು ಒಳ್ಳೆ ಐಡಿಯಾ ಕೊಡ್ತೀನಿ. ನನ್ ಬದ್ಲು ವಿಜೀನ ಕರ್ಕೊಂಡು ಹೋಗು ನಾನು ಇನ್ನೊಂದಷ್ಟು ವರ್ಷ ಆದಮೇಲೆ ನಿನ್ ಹತ್ರ ಬರ್ತೀನಿ.
ಯಮರಾಜ : ನೀನು ನನಗೆ ಓಲೈಸಿ ನಿನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡ..
ನಾನು : ಏನ್ ಗುರು ನೀನೂ ನನ್ನ ಅಪಾರ್ಥ ಮಾಡ್ಕೊಂಡು ಬಿಟ್ಟೆ ನನ್ನ. ನಂ ಆಫೀಸಲ್ಲೂ ಅಷ್ಟೇ ನಂ ಬಾಸೂ ನಿನ್ ಹಂಗೆ ನನ್ನ ಶ್ಯಾನೆ ತಪ್ಪು ತಿಳ್ಕಂಡವ್ರೆ .... ನಂಗೆ ನನ್ ಜೀವದ್ ಮೇಲೆ ಆಸೆ ಅಲ್ಲ ಅದು ನಿನ್ ಮೇಲಿರೋ ಅಭಿಮಾನ ಗುರೂ.....ನಂ ರಾಜ್ಕುಮಾರ್ ಅಣ್ಣನ್ನ ಬಿಟ್ರೆ ನಾನ್ ನಿನ್ನೆ ಲೈಕ್ ಮಾಡೋದು ಗುರು ದೇವರಾಣೆಗೂ.
ಯಮರಾಜ : ನಿನ್ನ ಹೊಗಳಿಕೆಯ ಗಾಳಕ್ಕೆ ನಾನು ಸಿಲುಕುವವನಲ್ಲ, ನಿನ್ನ ಜಾಣ್ಮೆಯನ್ನು ನನ್ನ ಮುಂದೆ ಪ್ರದರ್ಶಿಸಬೇಡ...
ನಾನು : (ಏನಪ್ಪಾ ಮಾಡೋದು ಪಾರ್ಟಿ ಯಾವುದಕ್ಕೂ ಜಗ್ತಾ ಇಲ್ಲ) ಅಲ್ಲಯ್ಯಾ ಯಮಧರ್ಮರಾಯ ನೀನೇನಾದ್ರೂ ನನಗೆ ಜೀವದಾನ ಮಾಡಿದರೆ ನಿನಗೆ ಭಾರೀ ಭರ್ಜರೀ ಉಡುಗೊರೆ ಕೊಡುತ್ತೇನೆ. ಸದ್ಯದಲ್ಲೇ ನಮ್ಮ ಕೇಂದ್ರ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿ ನಮ್ಮ ಭಾರತೀಯರು ತೊಡಗಿಸಿರೋ (ಅಡಗಿಸಿರೋ) ಕಪ್ಪುಹಣ ವಾಪಸ್ ತರ್ತಾರೆ. ಹಾಗೆ ಅವರು ತಂದು ಕೊಡೋ ದುಡ್ಡನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಂಚ್ತಾರೆ......ಆಗ ನಂಗೂ ಒಂದಷ್ಟು ಲಕ್ಷಾನೋ - ಕೋಟಿನೋ ಬರುತ್ತೆ ಅದೆಲ್ಲಾ ನಿಂಗೆ ಕೊಟ್ಬಿಡ್ತೀನಿ ಈಗ ಸದ್ಯಕ್ಕೆ ನನಗೆ ಪ್ರಾಣಭಿಕ್ಷೆ ಕೊಡು ಗುರುವೇ.....

ಯಮರಾಜ : ಅಯ್ಯೋ ..... ಗುರುವೇ ನಿಂಗೆ ಕೈಮುಗೀತೀನಿ ದಯವಿಟ್ಟು ನನ್ ಜೊತೆ ಬಾ ಈಗ.... ನಿಮ್ಮ ಸರ್ಕಾರದವ್ರು ಕಪ್ಪುಹಣ ವಾಪಸ್ ತರೋ ಹೊತ್ತಿಗೆ ನಾನು ಬದುಕಿರ್ತೀನೋ ಇಲ್ವೋ ನಂಗೇ ಗೊತ್ತಿಲ್ಲಾ....ಸುಮ್ನೆ ನಡೀ.......

ಯಮರಾಜ ಜೋರಾಗಿ ನನ್ ಕಡೆ ಹಗ್ಗ (ಯಮಪಾಶ) ಎಸೆದ ....... 

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>......................... 


ನಾನು ಕಣ್ಬಿಟ್ಟೆ ....... ಆಗ್ಲೇ ಬೆಳಿಗ್ಗೆ ಒಂಭತ್ತು ಘಂಟೆ...... ಆಫೀಸಿಗೆ ಟೈಮಾಯ್ತು...... ಬಾಸ್ ಹತ್ರ ಇವತ್ತೂ ಬೈಸ್ಕೊಬೇಕು ಛೇ !!!



ಬುಧವಾರ, ಫೆಬ್ರವರಿ 8, 2012

ಅವಿವೇಕ - ಅತಿರೇಕ

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ 
ವಿ.ಭಟ್ : ಹೇಳಿ ವಿಜಯ್ 
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ.ನಂದೊಂದು request ನೀವು ತೋರಿಸ್ತಾ ಇರೋ     ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ. 
ವಿ.ಭಟ್ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ ...... blur ಮಾಡ್ಬೇಡಿ ಹಾಗೇ ತೋರಿಸಿ ಅಂತ. 
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ವಿ.ಭಟ್ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ. 
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ........ ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ - ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ..... ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ
ವಿ.ಭಟ್ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ 
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ .......

                                  ಇಷ್ಟು ಹೇಳಿ ನಾನು ಫೋನ್ disconnect ಮಾಡಿದೆ. ಇದಿಷ್ಟೂ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಯ ಸಮಯದಲ್ಲಿ. ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲರ ಕೀಳು ಅಭಿರುಚಿ ಇಷ್ಟಕ್ಕೆಲ್ಲ ಕಾರಣ. ವಿಧಾನಸಭೆಯ ಕಲಾಪದ ಸಮಯದಲ್ಲಿ ಕಾಮಕೇಳಿಯ ವೀಡಿಯೊ ನೋಡುತ್ತಿದ್ದ ಈ ಪುಡಾರಿಗಳ ನಿಜ ಬಣ್ಣ ಬಯಲು ಮಾಡಿದ ಮಾಧ್ಯಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. 
  
                                24  X 7 ನ್ಯೂಸ್ ಚಾನಲ್ಲುಗಳ ಸಂಖ್ಯೆ ಹೆಚ್ಚಿದಂತೆ TRP (Target rating point ) ಸಮರ ಹೆಚ್ಚುತ್ತಿದೆ. ದಿನವಿಡೀ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಅನಿವಾರ್ಯತೆ ಎದುರಿಸುತ್ತಿರುವ ನ್ಯೂಸ್ ಚಾನಲ್ಲುಗಳು ಇಂತಹ ಗಿಮಿಕ್ಕುಗಳಿಗೆ ಇಳಿಯುತ್ತವೆ. "ನೇರ, ದಿಟ್ಟ , ನಿರಂತರ" ಸುದ್ದಿ ಬಿತ್ತರಿಸುವ ಭರದಲ್ಲಿ ಮಾಧ್ಯಮಗಳಿಗೆ ಇರಬೇಕಾದ ಸಾಮಾಜಿಕ ಕಾಳಜಿ, ಪತ್ರಿಕಾ ಧರ್ಮ, ನೀತಿ ನಿಯಮಗಳನ್ನು ಮರೆಯುತ್ತವೆ. 

                                ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನಿಜಕ್ಕೂ ಅಸಹ್ಯಕರ. ಆದರೆ ಇಂತಹ ಅಸಹ್ಯಗಳು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಹಲವು ಬಾರಿ ನಡೆದಿವೆ. ಹಣದ ಆಸೆಗೆ ಬಿದ್ದು ತಮ್ಮನ್ನೇ ಮಾರಿಕೊಂಡ ಸಂಸದರು, ಲೋಕಸಭೆಯಲ್ಲಿ ಲೋಕಪಾಲ್ ಮಸೂದೆಯ ಪ್ರತಿಯನ್ನು ಹರಿದೆಸೆದ ಸಂಸದರು, ವಿಧಾನಸಭೆಯಲ್ಲಿ ಕುರ್ಚಿಗಳನ್ನು,ಚಪ್ಪಲಿಗಳನ್ನೂ ಎಸೆದಾಡಿದ ಶಾಸಕರು ....ಒಂದೆರಡಲ್ಲ ಹತ್ತಾರು ಉದಾಹರಣೆಗಳನ್ನು ನಮ್ಮ ದೇಶದ ರಾಜಕಾರಣಿಗಳು ನಮಗಾಗಿ ಇತಿಹಾಸದಲ್ಲಿ ಉಳಿಸಿದ್ದಾರೆ. 

                                ಬೇರೆಯವರು ಮಾಡಿದ ತಪ್ಪನ್ನು ತೋರಿಸುವ ಭರದಲ್ಲಿ ನಾವೂ ತಪ್ಪು ಹಾದಿ ತುಳಿಯದಂತೆ ಎಚ್ಚರವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಯಾರೋ ಮಾಡಿದ ಅವಿವೇಕಕ್ಕೆ ಅತಿರೇಕದ ಸುದ್ದಿ ಬಿತ್ತರಿಸುವುದು ಸರಿಯಲ್ಲ.  ಇನ್ನಾದರೂ ನಮ್ಮ 24 X  7 ಸುದ್ದಿವಾಹಿನಿಗಳು ಎಚ್ಚೆತ್ತುಕೊಂಡು ಕೇವಲ ಮಾರುಕಟ್ಟೆ ದೃಷ್ಟಿಯಿಂದ ಹೊರಬಂದು ಮಾಧ್ಯಮಗಳ ಘನತೆಯನ್ನು ಎತ್ತಿಹಿಡಿಯಬೇಕಿದೆ.

ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

ಅದೊಂದು ಉದ್ಯಾನ
ಉದ್ಯಾನದೊಳಗೊಂದು
ಮಹಾತ್ಮನ ಪ್ರತಿಮೆ

ಮಹಾತ್ಮನೆಡೆಗೆ ನಿರ್ಲಿಪ್ತ ನೋಟ 
ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ
ತನ್ನಲ್ಲೇ ಏನನ್ನೋ ಹೇಳಿಕೊಳ್ಳುತ್ತಾ

ಅಯ್ಯಾ ನನಗೀಗ ವಯಸ್ಸು ಎಂಭತ್ತು
ನೀ ಎಂಭತ್ತರ ಹೊಸ್ತಿಲಲ್ಲೇ ಗುಂಡೇಟಿಗೆ 
ನಿನ್ನ ಗುಂಡಿಗೆಯ ಕೊಟ್ಟೆ 

ಅಷ್ಟರಲ್ಲಾಗಲೇ ನೀ 
ಮಹಾತ್ಮನಾಗಿದ್ದೆ, ಜನಮಾನಸದಲ್ಲಿ 
ಮನೆಯ ಮಾಡಿದ್ದೆ 

ನಾನಿಂದು ಬದುಕಿದ್ದೇನೆ 
ಭೂಮಿಗೆ ಭಾರವಾಗಿ, ಮನೆಯವರಿಗೆ
ಬೇಡವಾಗಿ.......ತೊಡಕಾಗಿ 

ಸತ್ವಹೀನ ನನ್ನ ಬದುಕು-
ಸತ್ಯಕ್ಕೆ ನೀನಾದೆ ಬೆಳಕು, 
ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ  

"ನೀ ಮಹಾತ್ಮನಾಗದಿದ್ದರೆ ಏನಂತೆ  ನೀ 
ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
 ಬದುಕಿರುವವರೆಗೂ ನೀ ನಗುನಗುತಾ ಬದುಕು"

ಅಶರೀರವಾಣಿಯೊಂದು ನುಡಿದ ಹಾಗಾಗಿ
ವೃದ್ದ ತಾ ಬೆರಗಾಗಿ ಸಾಗಿದನು ಮನೆಯತ್ತ 
ಆನಂದವಾಗಿ.............