ಬುಧವಾರ, ಜುಲೈ 27, 2011

ಯಡ್ಯೂರಪ್ಪನಿಗೆ ನೊಬೆಲ್ ಅವಾರ್ಡು

ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರ್ಲೇಬೇಕು.

ಸಿದ್ದ : ಲೇ ಕೆಂಚ ಇವತ್ತು ಪೇಪರ್ ನೋಡ್ದೆನ್ಲಾ ?
ಕೆಂಚ : ಹೂ ಕನ್ಲಾ ನೋಡ್ದೆ, ಪಾಪ ನಮ್ ಯಡ್ಯೂರಪ್ನೋರಿಗೆ ಶ್ಯಾನೆ ಕಾಟ ಕೊಡ್ತಾವ್ರೆ. ಈ ಸಂತೋಷ್ ಹೆಗ್ಡೆ                 ಲೋಕಾಯುಕ್ತ      ಆದಾಗಿಂದ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಸಂತೋಷಾನೇ ಕಾಣಾಕಿಲ್ಲ.........ಸದ್ಯ ಇನ್ನೊಂದು ವಾರಕ್ಕೆ ಆವಯ್ಯ ರಿಟೈರ್ ಆಯ್ತಾರೆ ಇನ್ನಾರಾ ನಮ್ ಸಿಎಮ್ಮು ಸುಖವಾಗಿ ಇರ್ಬೌದು ಅಂದ್ಕೊಂಡ್ರೆ ಅದೇನೋ "ಗಣಿ ಬಾಂಬ್" ಹಾಕ್ಬಿಟ್ರಲ್ಲ ಸಂತೋಷ್ ಹೆಗ್ಡೆ ಅವ್ರು.
ಸೀನ : ಅಲ್ಲಲೇ ಕೆಂಚ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಯಾವಾಗ್ಲಾ ಸಂತೋಷ ನೋಡಿದ್ದೇ ನೀನು!? ಆವಯ್ಯ ಯಾವಾಗಲೂ ಮುಖ ಗಂಟ್ ಹಾಕ್ಕಂಡೆ ಇರ್ತಾರೆ....... 
ಸಿದ್ದ : ನಿಜ ಕಣ್ಲಾ ಸೀನ......ಆವಯ್ಯ ನಗೋದೇ ಕಷ್ಟ ಕಣ್ಲಾ ಅದ್ಕೆ ಅವ್ರು ಸದಾನಂದ ಗೌಡ್ರುನ್ನ ಪಕ್ಕಕ್ಕೆ ಇಟ್ಕಂಡಿದ್ರು.....ಸದಾನಂದ ಗೌಡ್ರು ಯಾವಾಗ್ಲೂ ನಗ್ತಾ ಇರ್ತಾರೆ, ಆದ್ರೆ ಈಶ್ವರಪ್ಪ ಬಂದು ಸದಾನಂದ ಗೌಡ್ರುನ್ನ ಎಬ್ಬಿಸಿ ಅವ್ರ ಸೀಟ್ನಾಗೆ ಇವ್ರು ಕುಂತ್ಕಂಬುಟ್ರು. 
ಕೆಂಚ : ಅದೇನಾರಾ ಆಗ್ಲಿ ಬುಡ್ಲಾ.....ಆದ್ರೂ ನಮ್ ಯಡ್ಯೂರಪ್ನೋರು ಇಷ್ಟೆಲ್ಲಾ ಒಳ್ಳೆ ಕೆಲ್ಸ ಮಾಡುದ್ರು ......ಆದ್ರೆ ಈ ಟಿವಿನೋರು, ಪೇಪರ್ನೋರು ನಮ್ ಸಿಎಂ ಬಗ್ಗೆ ಬರೀ ಕೆಟ್ಟದ್ದೇ ಹಾಕ್ತಾರೆ..ಭಾಳಾ ಮೋಸ.
ಸಿದ್ದ : ಸಿಎಂ ಸಾಹೇಬ್ರು ನಿಂಗೂ ಏನಾರಾ ಕಾಸು-ಗೀಸು  ಕೊಟ್ರೆನ್ಲಾ ಕೆಂಚ ....ಈಪಾಟಿ ವಹಿಸ್ಕಂತ ಇದ್ದೀಯ ಆವಯ್ಯನ್ನ.
ಕೆಂಚ : ಅದ್ಕಲ್ಲಾ ಕಣ್ಲಾ ಸಿದ್ದ....ನನ್ ಹೆಂಡ್ರು ಹುಟ್ಟಿದ ಹಬ್ಬಕ್ಕೆ ಸೀರೆ ಕೊಡ್ಸು ಅಂತ ಪ್ರಾಣ ತೆಗೀತಾ ಇದ್ಲು , ಕಾಸಿಲ್ಲ ಕಣಮ್ಮಿ ಬಾರೋ ವರ್ಷ ಕೊಡುಸ್ತೀನಿ ಅಂದ್ರೆ ಜಗಳಕ್ಕೆ ಬತ್ತಿದ್ಲು. ಅದೇ ಟೈಮ್ಗೆ ನಮ್ ಸಿಎಂ ಸಾಹೇಬ್ರು ದೇವ್ರು ಬಂದಂಗೆ ಬಂದು "ಭಾಗ್ಯಲಕ್ಷ್ಮಿ" ಸ್ಕೀಮ್ನಾಗೆ ಸೀರೆ ಹಂಚುದ್ರು . ನನ್ ಮಗ್ಳು ಸೈಕಲ್ ಕೊಡ್ಸು ಇಲ್ಲಾಂದ್ರೆ ಸ್ಕೂಲಿಗೆ ಹೋಗಕಿಲ್ಲ ಅಂತಿದ್ಲು. ನಮ್ ಯಡ್ಯೂರಪ್ನೋರು ಸೈಕಲ್ ಕೊಟ್ಟು ಪುಣ್ಯ ಕಟ್ಕಂಡರು. ಕಷ್ಟಕಾಲ್ದಾಗೆ ನಮ್ ಸಿಎಂ ಸಾಹೇಬ್ರು ದ್ಯಾವ್ರು ಬಂದಂಗೆ ಬಂದು ಸಹಾಯ ಮಾಡವ್ರೆ...ಈಗ ಅವ್ರು ಕಷ್ಟದಾಗೆ ಅವ್ರೆ, ನಾವು ಸಪೋಲ್ಟ್ ಮಾಡ್ನಿಲ್ಲ ಅಂದ್ರೆ ಸಿವ ಮೆಚ್ತಾನಾ!!
ಸಿದ್ದ : ಅಲ್ಲಾ ಕಣಲೇ ಕೆಂಚ ಸೀರೆ, ಚಡ್ಡಿ ಕೊಟ್ರು ಅಂತ ಅವ್ರು ಮಾಡಿದ್ನೆಲ್ಲ ಸರೀ ಅನ್ನಕೆ ಆಯ್ತದಾ? ಅದ್ನ ನಿಮ್ ಸಿವ ಮೆಚ್ತಾನಾ!!??
ಕೆಂಚ : ಯಡ್ಯೂರಪ್ಪ ನಮ್ 'ಧಣಿ' ಕಣ್ಲಾ ಅವ್ರು ಗಣಿ ದುಡ್ದಾರಾ ತಿನ್ಲಿ ಏನಾರಾ ತಿನ್ಲಿ ನಮ್ ಸಪೋಲ್ಟು ಮಾತ್ರ ಅವರ್ಗೆ ಕಣ್ಲಾ 
ಸೀನ : ಇನ್ನೊಂದು ಇಶ್ಯ ಪೇಪರ್ನಾಗೆ ಬಂದೈತೆ ನೋಡ್ದ ಸಿದ್ದ. ನಮ್ ಸಿಎಂ ಯಡ್ಯೂರಪ್ನೋರ್ಗೆ ನೊಬೆಲ್ ಅವಾರ್ಡ್ ಕೊಡ್ಬೇಕಿತ್ತಂತೆ.

ಅಷ್ಟೊತ್ತಂಕ ಸುಮ್ನೆ ಕುಂತಿದ್ದ ನಾಣಿ ಎದ್ದು ನಿಂತ್ಕಂಡು ಒಂದೇ ಒಂದು ಪಂಚಿಂಗ್ ಡೈಲಾಗ್ ಹೊಡ್ದ " ಇಷ್ಟೆಲ್ಲಾ ಗೋಲ್ಮಾಲ್ ಮಾಡಿರೋ ನಮ್ ಸಿಎಂಗೆ ನೊಬೆಲ್ ಅವಾರ್ಡ್ ಅಲ್ಲ NO BAIL AWARD ಕೊಡ್ಬೇಕು " ಅಂದ.

ಯಾಕೋ ವಿಷ್ಯ ಗರಂ ಆಗ್ತಾ ಇದೆ ಅಂತ ಹೆದರಿದ ಟೀ ಅಂಗಡಿ ರಾಮಣ್ಣ ನಾಲ್ಕೂ ಜನರಿಗೆ ಫ್ರೀಯಾಗಿ ಗರಮಾಗರಂ ಟೀ ಕೊಟ್ಟು ಕಳಿಸಿದ. 

ಮಂಗಳವಾರ, ಜುಲೈ 26, 2011

ಇಂದಿಗೆ ಒಂದು ವರ್ಷದ ಹರ್ಷ

                          ನನ್ನೆಲ್ಲಾ ನಲ್ಮೆಯ ಗೆಳೆಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಂದು ೨೭ನೇ  ಜುಲೈ ೨೦೧೧. ಇಂದಿಗೆ ನನ್ನ "ಮನದ ಮಾತು" ಅಕ್ಷರ ರೂಪದಲ್ಲಿ ಮೂಡಲಾರಂಭಿಸಿ ಒಂದು ವರ್ಷ ಪೂರೈಸಿದೆ. ೨೭  ಜುಲೈ ೨೦೧೦ ರಂದು ನನ್ನ ಗೆಳೆಯನೊಬ್ಬನ ಇಂಗ್ಲಿಷ್ ಬ್ಲಾಗ್ ನೋಡಿ ನಾನೂ ಕನ್ನಡದಲ್ಲಿ ಒಂದು ಬ್ಲಾಗ್ ಬರೆಯೋಣ ಎಂದು ಪ್ರಾರಂಭಿಸಿದೆ. ನಾನು ಬ್ಲಾಗ್ ಬರೆಯಲು ಆರಂಭಿಸಿದ ದಿನದಿಂದ ಇಂದಿನವರೆಗೆ ಹಲವಾರು ಹಿರಿಯ ಬರಹಗಾರರು, ಗೆಳೆಯರು ನನ್ನನ್ನು ಬೆಂಬಲಿಸುತ್ತಾ, ನನ್ನ ತಪ್ಪಿದ್ದಾಗ ತಿದ್ದುತ್ತಾ, ಉತ್ತಮ ಬರಹಗಳನ್ನು ಪ್ರಶಂಶಿಸುತ್ತಾ, ಸ್ವಾರಸ್ಯಕರ ಚರ್ಚೆಗೆ ಹಚ್ಚುತ್ತಾ ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾಗಿದ್ದಾರೆ. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ.  


                        ಇತ್ತೀಚಿಗೆ ಹಲವಾರು ದಿನಗಳಿಂದ ನಾನು ಬರವಣಿಗೆಯಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಲಾಗಿಲ್ಲ. ಇನ್ನು ಮುಂದೆ ಸಾಧ್ಯವಾದಷ್ಟೂ ನಿರಂತರವಾಗಿ ಬರೆಯಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುವೆ. 

ವಂದನೆಗಳೊಂದಿಗೆ,


ವಿಜಯ್ ಹೆರಗು 



ಸೋಮವಾರ, ಜುಲೈ 11, 2011

ಮೂಡಿಬಂದ ಮೋಡಿಗಾರ

ಅದೋ ನೋಡು ಮೂಡಣದಲಿ
ಮೂಡಿಹನವ ಮೋಡಿಗಾರ
ಜಗಕೆಲ್ಲ ಬೆಳಕ ನೀಡಿ
ಜಗಮಗಿಸುವ ನೇಸರ

ದಣಿವೆಯೆಂಬುದನ್ನು ಅರಿಯ

ತನ್ನ ಕಾಯಕವನ್ನು ಮರೆಯ
ಒಮ್ಮೆ ಅತ್ತ ಒಮ್ಮೆ ಇತ್ತ
ಭುವಿಯ ಸುತ್ತಿ ಬೆಳಕನಿತ್ತ

ಸೂರ್ಯೋದಯ - ಸೂರ್ಯಾಸ್ತ

ನೋಡಲೆನಿತು ಸುಂದರ
ಇವನಿಗೊಬ್ಬ ಜೊತೆಗಾರ
ಅವನೇ ಚೆಲುವ ಚಂದಿರ 


ಇವನಂದಕೆ ಇವನೇ ಉಪಮೆ
ಸಾಟಿ ಬೇರೆಯಿಲ್ಲ ಇವನಿಗೆ
ಅಂಧಕಾರವನ್ನು ಅಳಿಸಿ
ಕೊಂಡೊಯ್ಯುವ ಬೆಳಕಿನೆಡೆಗೆ

 


 









ಬುಧವಾರ, ಜೂನ್ 15, 2011

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

ಪ್ರಿಯ ಗೆಳೆಯರೇ, 

                     "ರಾಬಿನ್ ಚುಗ್", ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
                   
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  "ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು" ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು. 
                      
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 'ಬೆಂಗಳೂರ್ ಮಿರರ್' ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ "F**K OFF" ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ.http://www.bangaloremirror.com
/index.aspx?page=article&sectid=10&contentid=201106072011060

               ಹೀಗೆ ಕೀಳುದರ್ಜೆಯ ಪ್ರತಿಕ್ರಿಯೆಯೊಂದನ್ನು ನೀಡಿದ ರಾಬಿನ್ ತನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದಲೇ ಉಗಿಸಿಕೊಂಡಿದ್ದಾನಾದರೂ ಆ ಪ್ರತಿಕ್ರಿಯೆಯನ್ನು ಅಥವಾ ಪೋಸ್ಟ್ ಅನ್ನು ತೆಗೆದುಹಾಕಿರಲಿಲ್ಲ. ನಂತರದಲ್ಲಿ ಬಂದ ವ್ಯಾಪಕ ಟೀಕೆ ಹಾಗೂ ಬೆದರಿಕೆಗಳಿಗೆ ತಲೆಬಾಗಿ ಕೊನೆಗೆ ಆ ಪೋಸ್ಟನ್ನು ತೆಗೆದ ಹಾಗೂ ಕ್ಷಮೆಯಾಚಿಸಿದ. ಇಷ್ಟರ ವೇಳೆಗೆ ಆತನ ಕಚೇರಿಯ ವಿಳಾಸ, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ ಎಲ್ಲೆಡೆ ಹರಡಿತ್ತು. ನನಗೂ ಸಹ ಗೆಳೆಯ ಸಾಗರ್ ರಾಜ್ ಮುಖಾಂತರ ಆತನ ಮೊಬೈಲ್ ನಂಬರ್ ಸಿಕ್ಕಿತು. ಇಷ್ಟರಲ್ಲಾಗಲೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿರಬಹುದು ಎಂದುಕೊಂಡೇ ಕರೆ ಮಾಡಿದೆ. ಎರಡು ರಿಂಗ್ ಆದಮೇಲೆ ಫೋನ್ ತೆಗೆದ. ನಾನು ಅವನಿಗೆ ಮೊದಲು ಕೇಳಿದ ಪ್ರಶ್ನೆ "ನಿನಗೆ ಕನ್ನಡ ಬರುತ್ತಾ? ಅದಕ್ಕವನು ಸ್ವಲ್ಪ ಸ್ವಲ್ಪ ಗೊತ್ತು ಅಂತ ಹೇಳಿದ. ಕನ್ನಡ ನಾಡಿಗೆ ಬಂದು, ಕನ್ನಡದ ಜನರ ಮಧ್ಯೆ ಇದ್ದು, ಕನ್ನಡಿಗರ ಅನ್ನ ತಿಂದು ಇಲ್ಲಿನ ನೀರು ಕುಡಿದು ಜೀವನ ಸಾಗಿಸುತ್ತಿರುವ ನೀನು ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಹೀಗೆ ಹೀನ ಪದ ಪ್ರಯೋಗ ಮಾಡಿದ್ದು ಎಷ್ಟು ಸರಿ ಎಂದು ದಬಾಯಿಸಿದೆ. ಅದಕ್ಕವನು " ಇಲ್ಲ ಸರ್, ನನ್ನ ಉದ್ದೇಶ ಆ ಶಿಫಾರಸ್ಸನ್ನು ವಿರೋಧಿಸುವುದಷ್ಟೇ ಆಗಿತ್ತು, ಆದರೆ ನಾನು ಬಳಸಿದ ಶಬ್ದದ ಬಗ್ಗೆ ನನಗೆ ಪಶ್ಚಾತ್ತಾಪ ಇದೆ" ಎಂದ. 

                  ಕನ್ನಡಿಗರು ಉದಾರ ಹೃದಯಿಗಳು. ಇದು ನಮ್ಮ ವಿಶೇಷತೆಯೂ ಹೌದು ಜೊತೆಗೇ ವೀಕ್ನೆಸ್ ಕೂಡಾ. ನಾವು ಕನ್ನಡಿಗರು ಅಂಗಡಿಗೆ ಬಂದ ವಲಸಿಗ ಗಿರಾಕಿಯನ್ನು ಅವರದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷಿನಲ್ಲಿ ಮಾತಾಡಿಸುತ್ತೇವೆ. ವಿಳಾಸ ಹುಡುಕುತ್ತಾ ಬಂದ ಹೊರಗಿನವರಿಗೆ ಅವರದೇ ಭಾಷೆಯಲ್ಲಿ ಅಡ್ರೆಸ್ ಹೇಳುತ್ತೇವೆ. ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತೇವೆ. ಅವರ ಅನುಕೂಲಕ್ಕಾಗಿ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತೇವೆ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸುವ ನಿನ್ನಂತಹ ಮಂದಿ ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ದಬಾಯಿಸಿದೆ. ಮತ್ತೊಮ್ಮೆ ತನ್ನ ತಪ್ಪಿಗಾಗಿ ಕ್ಷಮೆ ಕೇಳಿದ ಆತ ಇನ್ನೆಂದೂ ತಾನು ಈ ರೀತಿ ವರ್ತಿಸುವುದಿಲ್ಲ ಎಂದು ಅಲವತ್ತುಕೊಂಡ. ನಿನಗೆ ಆಸಕ್ತಿಯಿದ್ದಲ್ಲಿ ನಾನು ನಿನಗೆ ಕನ್ನಡ ಕಳಿಸಿಕೊಡುತ್ತೇನೆ ಎಂದು ಆತನಿಗೆ ಹೇಳಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆತ ಕನ್ನಡ ಕಲಿಯಬೇಕೆಂಬ ಆಸೆ ತನಗೂ ಇದೆ ಎಂದು ಹೇಳಿದ. ಮತ್ತೇಕೆ ನೀನು ಆ ಶಿಫಾರಸ್ಸನ್ನು ವಿರೋಧಿಸಿದೆ ಎಂದು ಕೇಳಿದೆ.   
ಅದಕ್ಕೆ ಆತನ ಪ್ರತಿಕ್ರಿಯೆ ಹೀಗಿತ್ತು " ನಾನು ಕಳೆದ ೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನ್ನ ಅವಶ್ಯಕತೆಗೆ ತಕ್ಕಷ್ಟು ಮಟ್ಟಿಗಿನ ಕನ್ನಡ ಕಲಿತಿದ್ದೇನೆ.ಇದನ್ನು ನಾನು ನನ್ನ ಅವಶ್ಯಕತೆಗಾಗಿ ಕಲಿತಿದ್ದೇನೆ ಹೊರತು ಯಾರದೇ ಒತ್ತಾಯಕ್ಕಲ್ಲ. ಯಾರಾದರೂ ನನ್ನ ಬೆನ್ನ ಹಿಂದೆ ನಿಂತು ಲಾಠಿ ಹಿಡಿದು ಕನ್ನಡ ಕಲಿ ಎಂದಿದ್ದರೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕೆಂಬುದನ್ನು, ಏಳನೇ ತರಗತಿಯ ತತ್ಸಮಾನ ಕನ್ನಡ ಪರೀಕ್ಷೆ ಪಾಸು ಮಾಡಬೇಕು ಎಂಬುದನ್ನು ನಾನು ವಿರೋಧಿಸಿದೆ." 

                ರಾಬಿನ್ ಹೇಳಿದ ಈ ಮಾತುಗಳನ್ನು ಕೇಳಿದ ನಂತರ ಈತನ ಮಾತುಗಳಲ್ಲೂ ಸತ್ಯವಿದೆ ಎನ್ನಿಸಿತು. ಕರ್ನಾಟಕಕ್ಕೆ ಉದ್ಯೋಗ ಅರಸಿ, ಬದುಕು ಕಟ್ಟಿಕೊಳ್ಳಲು ಬಂದಿರುವ ಜನರಲ್ಲಿ ಕೇವಲ ವಿದ್ಯಾವಂತರು, ಅಕ್ಷರಸ್ಥರೆ ಇಲ್ಲ. ಅನಕ್ಷರಸ್ಥರು, ಅವಿದ್ಯಾವಂತರೂ ಇದ್ದಾರೆ. ಅವರುಗಳು ಏನು ಮಾಡಬೇಕು? ಹೊರರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರಿಗೂ ಆಯಾ ರಾಜ್ಯಗಳ ಸರ್ಕಾರ ಇಂತಹುದೇ ಕಾನೂನು ಜಾರಿಗೆ ತಂದರೆ ನಾವು ಒಪ್ಪುವುದು ಸಾಧ್ಯವೇ? ಎಂದು ನನ್ನ ಮನಸ್ಸು ಕೇಳುತ್ತಿತ್ತು. ಆದರೆ ರಾಬಿನ್ ಪ್ರತಿಕ್ರಿಯಿಸಲು ಉಪಯೋಗಿಸಿದ ಭಾಷೆಗೆ ನನ್ನ ವಿರೋಧ ಇದ್ದೇ ಇದೆ. ಆದಕ್ಕೆ ನಾನು ಅವನಿಗೊಂದು ಸಲಹೆ ನೀಡಿದೆ. ನಿನಗೆ ಬರುವ ಎಲ್ಲಾ ಮೊಬೈಲ್ ಕರೆಗಳನ್ನೂ ಸ್ವೀಕರಿಸಬೇಕು, ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು, ಎಲ್ಲಾ ಕರೆಗಳು, ಮಿಂಚಂಚೆಗಳಿಗೂ ಉತ್ತರಿಸಬೇಕು, ಎಲ್ಲರಲ್ಲಿ ಕ್ಷಮಾಪಣೆ ಕೇಳಬೇಕು.....ಇದೇ ನಿನ್ನ ತಪ್ಪಿಗೆ ಶಿಕ್ಷೆ ಎಂದು ಭಾವಿಸು ಎಂದೆ. ನನ್ನ ಮಾತನ್ನು ಒಪ್ಪಿದ ಅವನು ಈಗಾಗಲೇ ಅದೇ ರೀತಿಯಲ್ಲಿ ವರ್ತಿಸುತ್ತಿದ್ದು ಲಿಖಿತರೂಪದಲ್ಲಿ ಕೂಡಾ ಕ್ಷಮೆ ಯಾಚಿಸಿದ್ದಾನೆ. "ಪಶ್ಚಾತಾಪಕ್ಕಿಂಥ ದೊಡ್ಡ ಶಿಕ್ಷೆ ಮತ್ತೊಂದಿಲ್ಲ" ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿ ನನ್ನೆಲ್ಲಾ ಸಹೃದಯೀ ಮಿತ್ರರಲ್ಲಿ ನನ್ನ ಮನವಿ ಏನೆಂದರೆ ಈ ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸೋಣ. 
                     
                ಕನ್ನಡ ನಾಡನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಅವಹೇಳನಕಾರಿ ಮಾತನ್ನಾಡಿದ ಅದೇ ವ್ಯಕ್ತಿಗೆ ಕನ್ನಡ ಕಲಿಸಿ ಕನ್ನಡ ನಾಡಿನ ಬಗ್ಗೆ ಹೆಮ್ಮೆಯ ಮಾತಾಡುವಂತೆ ಮಾಡುವ ಬಯಕೆ ಇದೆ. ನಿಮ್ಮ ಸಹಕಾರ, ಬೆಂಬಲ ಇರಲಿ. 



                 ವಿವಾದಕ್ಕೆ ಕಾರಣವಾದ ಪೋಸ್ಟ್ 
                                                                                                                               ಕ್ಷಮಾಪಣಾ ಪತ್ರ 
    

ಗುರುವಾರ, ಜೂನ್ 9, 2011

ಎತ್ತ ಸಾಗಿದೆ ಪ್ರಜಾಪ್ರಭುತ್ವ !!!???

                      ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.
                                         ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
                               ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ.

                   ದೇಶದ ಇಂಥ ಸ್ಥಿತಿಗೆ ಕಾರಣವೇನು ಎಂದು ಯೋಚಿಸಿದರೆ ಅದು ಸುತ್ತಿ ಬಳಸಿ ನಮ್ಮತ್ತಲೇ ಬೊಟ್ಟು ಮಾಡಿ ತೋರಿಸುತ್ತದೆ.  ಹಿರಿಯ ನ್ಯಾಯವಾದಿಗಳಾದ  ಎ.ಜಿ. ನೂರಾನಿ ಅವರು " Its an illusion that India is a multi-party democracy. There is really only one party" ಎಂದು ಒಂದೆರಡು ವರ್ಷದ ಹಿಂದೆ ತಮ್ಮ ಲೇಖನವೊಂದರಲ್ಲಿ ಹೇಳಿದ್ದರು  ಇಂದಿನ ಪರಿಸ್ಥಿತಿಗೆ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.                              ಹೌದು, ನಾವು ಭ್ರಮೆಯಲ್ಲಿದ್ದೇವೆ. ಇಲ್ಲಿ ಇರುವುದು ಒಂದೇ ಪಕ್ಷ. ಇಲ್ಲಿ ಆಡಳಿತ ಪಕ್ಷ ಏನು ಮಾಡುತ್ತದೋ, ಏನು ಹೇಳುತ್ತದೋ ಅದೇ ಸರಿ. ವಿರೋಧಪಕ್ಷ ಹೆಸರಿಗೆ ಮಾತ್ರ ಇದೆ. ಅದಕ್ಕೆ ಕವಡೆ ಕಿಮ್ಮತ್ತಿಲ್ಲ. 
                      ಉದಾಹರಣೆಗೆ, ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಪ್ಪುಹಣದ ವಿಷಯವನ್ನೇ ತೆಗೆದುಕೊಂಡರೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಭಾಜಪ " ಕಪ್ಪುಹಣವನ್ನು ಕೂಡಲೇ ವಾಪಸ್ ತನ್ನಿ " ಎಂದರೆ " ನೀವು ಆಡಳಿತದಲ್ಲಿದ್ದಾಗ ಏಕೆ ಕಪ್ಪುಹಣವನ್ನು ವಾಪಸ್ ತರಲಿಲ್ಲ, ಈಗೇಕೆ ಬೊಬ್ಬೆ ಹಾಕುತ್ತೀರಿ" ಎಂದು ಕೇಂದ್ರ ಸರ್ಕಾರವು 'ಭಾಜಪ'ದ  ಬಾಯಿ ಮುಚ್ಚಿಸುತ್ತದೆ. ಇನ್ನು ರಾಜ್ಯಸರ್ಕಾರದ ವಿಷಯಕ್ಕೆ ಬಂದರೆ ಭೂಹಗರಣ, ಗಣಿಹಗರಣ ಇನ್ನಿತರ ಯಾವುದೇ ವಿಷಯ ಚರ್ಚೆಗೆ ಬಂದರೂ ವಿರೋಧ ಪಕ್ಷಗಳ ಮೇಲೆ ಹರಿಹಾಯುವ ನಮ್ಮ ಮುಖ್ಯಮಂತ್ರಿಗಳು "ನಿಮ್ಮ ಆಡಳಿತದ ಅವಧಿಯಲ್ಲಿ ನೀವು ಮಾಡಿದ್ದೇನು? ನೀವು ಲೂಟಿ ಮಾಡಿಲ್ಲವೇ, ನಾವು ಮಾಡಿದರೆ ತಪ್ಪೇನು? "ಎಂಬ ಧೋರಣೆಯ ಹೇಳಿಕೆ ನೀಡುತ್ತಾರೆ.
                               ಇವೆಲ್ಲವನ್ನೂ ನೋಡಿದಾಗ ಒಮ್ಮೊಮ್ಮೆ ಮನಸ್ಸಿಗೆ ಆಘಾತವಾಗುತ್ತದೆ. ನಾವು ಮತದಾರರು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಏಳುತ್ತದೆ.
ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ಪಕ್ಷಗಳ ಪ್ರಣಾಳಿಕೆಗಳು ವಿಭಿನ್ನವಾಗಿರುತ್ತವೆ ಹೊರತು ಆಡಳಿತದಲ್ಲಿ ಅಂತಹದ್ದೇನೂ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಸರ್ಕಾರಗಳು ಕೈಗೊಂಡ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಹೊಸ ಹೆಸರು ನೀಡಿ     " ಹೊಸ ಬಾಟಲಿಯಲ್ಲಿ ಹಳೆಯ ಮದ್ಯ" ಎಂಬಂತೆ ಆಡಳಿತ ನಡೆಸುತ್ತಾರೆ.   
ಕೆಟ್ಟದ್ದಕ್ಕೆಲ್ಲಾ ಹಿಂದಿನ ಸರ್ಕಾರವನ್ನು ದೂಷಿಸುತ್ತಾ,ಒಳ್ಳೆಯದ್ದಕ್ಕೆಲ್ಲಾ ತಮ್ಮಿಂದಲೇ ಆದದ್ದು ಎಂದು ಬೀಗುತ್ತಾ, ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಾ ಇದನ್ನೇ 'ಆಡಳಿತ' ಎಂದು ತಿಳಿದಿರುವುದು ಇಂದಿನ ರಾಜಕಾರಣಿಗಳ ಬೌದ್ದಿಕ ದಾರಿದ್ರ್ಯದ ಪರಮಾವಧಿ ಎನ್ನದೆ ವಿಧಿಯಿಲ್ಲ. 

                     ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿಯೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿ ಸಾರ್ವಜನಿಕ ಚರ್ಚೆಗಳಾಗಬೇಕಿದೆ. ಈ ಪದ್ಧತಿ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿದ್ದು ಇಲ್ಲಿಯೂ ಇಂತಹ ಚರ್ಚೆ ನಡೆದರೆ ಮತದಾರನನ್ನು ಜಾಗೃತನಾಗಿಸಲು ನೆರವಾಗುತ್ತದೆ.



           

                    

ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

ಅಷ್ಟಗಲ ಆಗಸದಿ
ಎಷ್ಟೊಂದು ಹಕ್ಕಿಗಳು
ಆಸೆಯಾಗುತಿದೆ 'ಹೇಗಾದರೂ ಮಾಡಿ
ಹೆಕ್ಕಬೇಕಿದೆ ಹಾದಿ'
ಹಾರಿ ಸೇರಲೇಬೇಕು ಮುಗಿಲ ಹಾದಿ   




ಬಾನ ಎತ್ತರಕೇರಿ
ಮೋಡದೊಳಗಡೆ ತೂರಿ
ಹಾರುವಾಸೆಯು ಎನಗೆ ಕಲಿಸಿ ಹೇಗೆ?
ಗೂಡನೊಂದನು ಕಟ್ಟಿ, ಕೊಕ್ಕಲ್ಲಿ ಹಿಡಿದು ರೊಟ್ಟಿ
ಕಂದಗೆ ತಂದುಣಿಸುವ ಕಲೆಯ ತಿಳಿಸಿ ಎನಗೆ






ನಿಮ್ಮಂತೆಯೇ ನಾನು
ಪಡೆಯಬೇಕಿದೆ ರೆಕ್ಕೆ
ಹಾರಬೇಕಿದೆ ದೂರ ದೂರ......
ಸಪ್ತಸಾಗರ ದಾಟಿ, ಎಲ್ಲ ಎಲ್ಲೆಯ ಮೀಟಿ
ಕಾಣಬೇಕಿದೆ ಹೊಸತು ಬದುಕ ಸಾ

ಸೋಮವಾರ, ಮೇ 16, 2011

ಬಲಾಬಲ

ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.




ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.



ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
                            ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.



ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.



ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ.....ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,

ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ....ನೋಡಿ ಆನಂದಿಸೋಣ



ಕೊನೆಗೂ ಹತ್ತು ಮಂದಿ

ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ

ಪ್ರಶ್ನೆಯೊಂದು ಹಾಗೇ ಉಳಿದಿದೆ

ನಮ್ಮ ಜನರಿಗೆ ಬುದ್ಧಿ ಬಂದೀತೇ !!??

ಶನಿವಾರ, ಮೇ 14, 2011

ಅ"ರಾಜಕೀಯ"

                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿ ಮತ್ತೊಮ್ಮೆ ಅಲುಗಾಡಿದಂತೆ ಕಾಣುತ್ತಿದೆ. ಆದರೆ ಯಡಿಯೂರಪ್ಪ ಬಗ್ಗುವ ಆಸಾಮಿಯಲ್ಲ  . ಈಗಾಗಲೇ  ಅವರು ತಮ್ಮ ಸೀಟು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
           
                                            ಬಿಜೆಪಿಯ ೧೧ ಶಾಸಕರು ಹಾಗೂ ೫ ಮಂದಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಆಶಯ ಮೂಡಿಸಿದೆ. ಜೊತೆಜೊತೆಗೇ ಮುಂದೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                                          ಯಡಿಯೂರಪ್ಪನವರು ತಮ್ಮ ಪಕ್ಷದ ೧೧ ಶಾಸಕರಿಗೆ ಗಾಳ ಹಾಕಲು ತಯಾರಿ ನಡೆಸಿದ್ದು ಹಣದ, ಅಧಿಕಾರದ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದು"ಕೊಳ್ಳು"ವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಇದೇನೂ ಕಷ್ಟದ ಮಾತಲ್ಲ. ಈಗಿರುವ ಸ್ಥಿತಿಗಿಂತಲೂ ಸಂಕಷ್ಟದ ಸಮಯಗಳಲ್ಲಿ ಬಚಾವಾಗಿ ಬಂದ ಅನುಭವ ಅವರಿಗಿದೆ. ಮುಖ್ಯಮಂತ್ರಿಗಳು ತಮಗಿರುವ ಹಣಬಲ, ಜನಬಲವನ್ನು
 ಉಪಚುನಾವಣೆಗಳಲ್ಲಿ, ಕಮಲದ ಆಪರೇಷನ್ನುಗಳಲ್ಲಿ ತೋರ್ಪಡಿಸಿದ್ದಾರೆ.


ಕಾವಿಯ, ಕಾಸಿನ ಬಲವಿದ್ದರೆ ಸಾಕು



ಹೈಕಮಾಂಡನ್ನೇ ಗೆಲ್ಲುವೆನು


ನೋಟಿನ ಮೂಟೆಯ ಚೆಲ್ಲಿಯಾದರೂ


ಖುರ್ಚಿಗೆ ಅಂಟಿ ಕೂರುವೆನು
 
ಎಂದು ಹೇಳುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಯಡ್ಡಿಯ ವರಸೆಗೆ ಬ್ರೇಕ್ ಹಾಕಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡು ಕೇಂದ್ರದ ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರಿದೆ. ಇದನ್ನೇನು ಹುಂಬತನ ಎನ್ನಬೇಕೋ, ವ್ಯವಸ್ಥೆಯ ದೋಷ ಎನ್ನಬೇಕೋ ತಿಳಿಯುತ್ತಿಲ್ಲ . 
 
ಇನ್ನು ಮತ್ತೊಮ್ಮೆ ಕುಮಾರಸ್ವಾಮಿಯವರಿಗೆ ಕೈತುಂಬಾ ಕೆಲಸ. ತಮ್ಮೊಡನೆ ಬರಲು ಬಯಸುವ ಶಾಸಕರನ್ನು ಗೋವಾ ಕಡಲತಡಿಯಲ್ಲಿ ನೆನೆಹಾಕಬೇಕು. ಅವರು ಕೇಳಿದಷ್ಟು ಸವಲತ್ತುಗಳನ್ನು ಪೀಕಬೇಕು. ರೆಸಾರ್ಟು ಮಾಲೀಕರುಗಳನ್ನು ಉದ್ಧಾರ ಮಾಡಬೇಕು. 
ಮೀಡಿಯಾ ಜನರಿಗಂತು ಮತ್ತೊಂದು ಹಬ್ಬ ಬಂತು. ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸುಗಳು, ಚರ್ಚೆಗಳು ಮಾಡುತ್ತಾ ಟಿ ಆರ್ ಪಿ ಕಸರತ್ತಿನ ಪ್ರದರ್ಶನ. 
 



ಇವೆಲ್ಲದರ ನಡುವೆ ಹೈರಾಣಾಗುವ ಶ್ರೀಸಾಮಾನ್ಯ ತನ್ನ ನಸೀಬನ್ನು ದೂಷಿಸುತ್ತಾ ತಲೆ ಮೇಲೆ ಕೈ (ಕಾಂಗ್ರೆಸ್ಸ್ ಕೈ ಅಲ್ಲ)ಹೊತ್ತು ಕೂತು ಭ್ರಷ್ಟ ರಾಜಕಾರಣಿಗಳ ಸೋಗಲಾಡಿತನವನ್ನು ಶಪಿಸುತ್ತಾ ಕಾಯುತ್ತಾನೆ......ಬರಲಿರುವ ಚುನಾವಣೆಗಾಗಿ.....ಓಟಿಗಾಗಿ....ಗರಿಗರಿ ನೋಟಿಗಾಗಿ.......     

ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

ಮೊಲೆ ಉಣಿಸಿ

ಪ್ರೀತಿ ಮಳೆಗರೆದ

ಜೀವಕ್ಕೆ ಋಣಿ

____________________________

ಅಮ್ಮ ಎನ್ನುವ

ಎರಡಕ್ಷರದಲ್ಲಿ

ಅದೆಂಥಾ ಶಕ್ತಿ !!!


_______________________

ನಿನ್ನ ಮೊಗದ

ನಿಷ್ಕಲ್ಮಶ ನಗೆಯು

ಮಾಸದಿರಲಿ







_________________________

ತಾಯಿ ಕರುಣೆ,

ಪ್ರೀತಿ ಮುಂದೆ ದೇವರೂ

ಶರಣಾದನು

______________________________


ನಿಷ್ಕಲ್ಮಷತೆ,

ಮುಗ್ಧತೆ ನನ್ನಮ್ಮನ

ಒಡವೆಗಳು


___________________________








ಶುಕ್ರವಾರ, ಏಪ್ರಿಲ್ 29, 2011

"ಡೋಂಟ್ ಕೇರ್" ಕಾಲದಲ್ಲಿ "ವೀ ಕೇರ್"ಎಂಬ ವಿಸ್ಮಯ






ವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ. ನಾವು ಕಛೇರಿಗೆ ಅಥವಾ ಬೇರೆಲ್ಲಾದರೂ ಹೋಗುವಾಗ ಯಾರಾದರೂ ಅಪರಿಚಿತರು ತೊಂದರೆಯಲ್ಲಿ ಸಿಲುಕಿದ್ದಾಗ ಅವರಿಗೆ ಸಹಾಯಹಸ್ತ ಚಾಚುವ ಬದಲು "ನಮಗೇಕೆ ಬೇಕು ಅವರಿವರ ಉಸಾಬರಿ" ಎಂದು ಕಂಡೂ ಕಾಣದ ಹಾಗೆ ಹೊರಡುತ್ತೇವೆ. ತೊಂದರೆಯಲ್ಲಿದ್ದಂತೆ ನಟಿಸಿ ಜನರನ್ನು ದೋಚುವ ಪುಂಡರ, ದುಷ್ಕರ್ಮಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೂ ಈ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.

ಆದರೆ ಇಂದಿಗೂ ಮಾನವೀಯ ಮುಖವನ್ನು ಹೊಂದಿ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡ ಹಲವಾರು N G O ಗಳನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ತಾಜಾ ಉದಾಹರಣೆ "ವೀ ಕೇರ್ ಚಾರಿಟೀಸ್ (ರಿ)".
ಮೈಸೂರು ಜಿಲ್ಲೆಯ ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಎಂಬ ಚಿಕ್ಕ ಊರಿನ ಪ್ರಶಾಂತ ವಾತಾವರಣದಲ್ಲಿರುವ ಸಂಸ್ಥೆಯು ಮಾನಸಿಕವಾಗಿ ಅಸ್ವಸ್ಥಗೊಂಡು ಬೀದಿಗೆ ಬಿದ್ದು 'ಹುಚ್ಚ'ರೆಂದು ಸಮಾಜದಿಂದ ಅಸಡ್ಡೆಗೆ ಒಳಗಾದ ನಿರಾಶ್ರಿತ ಮಾನಸಿಕ ರೋಗಿಗಳನ್ನು ಕರೆತಂದು ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಶ್ರಮಿಸುತ್ತಿದೆ.
ಮಾನಸಿಕ ರೋಗಿಗಳಿಗೆ ಅಲೋಪತಿ, ಆಯುರ್ವೇದ, ಯೋಗ ಹಾಗೂ ಮನಶಾಸ್ತ್ರಗಳ ಮೂಲಕ ಚಿಕಿತ್ಸೆ ನೀಡಲೆಂದು ಪ್ರಾರಂಭಗೊಂಡ ಸಂಸ್ಥೆಯು ಕಾಲಕ್ರಮೇಣ ಕುಡಿತ,ಧೂಮಪಾನದಂತಹ ಮಾದಕ ದುಶ್ಚಟಗಳ ದಾಸರಾದವರಿಗೂ ಚಿಕಿತ್ಸೆ ನೀಡಿ ಅವರನ್ನು ಸರಿದಾರಿಗೆ ತರುವ ಕಾಯಕವನ್ನೂ ಮಾಡುತ್ತಿದೆ. 
ಸ್ವಸ್ಥ ಸಮಾಜದ ನಿರ್ಮಾಣವೇ ಧ್ಯೇಯವನ್ನಾಗಿಸಿಕೊಂಡು ದುಡಿಯುತ್ತಿರುವ ಸಮಾನ ಮನಸ್ಕ ಯುವಕರ ತಂಡಕ್ಕೆ ರೈಟ್ ಲೈವ್ಲಿ ಹುಡ್ ಪ್ರಶಸ್ತಿ ವಿಜೇತ ಡಾ.ಎಚ್.ಆರ್. ಸುದರ್ಶನ್, ಡಾ ರಾಜ್ ಗೋಪಾಲ್ ಅಂತಹ ಹಿರಿಯರು ಬೆನ್ನೆಲುಬಾಗಿ ನಿಂತು ಈ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಬೆಳೆಸಿದ್ದಾರೆ.

ಮಾನಸಿಕ ರೋಗಿಗಳಿಗೆ ಪರಿಣಿತ ವೈದ್ಯರಿಂದ ಚಿಕಿತ್ಸೆ ಕೊಡಿಸುವುದರ ಜೊತೆಗೆ ಧ್ಯಾನ, ಯೋಗ ಮತ್ತು ಆಪ್ತ ಸಲಹೆಯ ಮುಖಾಂತರ ಅವರನ್ನು ಪರಿವರ್ತಿಸಲಾಗುತ್ತದೆ. ಹೀಗೆ ಗುಣಮುಖರಾದ ರೋಗಿಗಳನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಪ್ಲಾಸ್ಟಿಕ್ ನಿರ್ಮೂಲನೆಯ ಪಣ ತೊಟ್ಟ  ಸಂಸ್ಥೆಯು ಇವರಿಂದ ಹತ್ತಿಯ ಕೈಚೀಲಗಳನ್ನು (ಕಾಟನ್ ಬ್ಯಾಗ್ಸ್) ತಯಾರಿಸುವ ಹಾಗೂ ಅವುಗಳನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸದ ಜೊತೆಗೆ ಹೊಲಿಗೆ ಯಂತ್ರ ಹೊಂದಿದ ಗ್ರಾಮೀಣ ಮಹಿಳೆಯರಿಗೂ ಕಸೂತಿ ಕೆಲಸವನ್ನು ನೀಡುವ ನಿಟ್ಟಿನಲ್ಲಿ ಸಾಗಿದೆ.

ಸಂಸ್ಥೆಯ ಆಧಾರ ಸ್ತಂಭಗಳಾದ ಮನು.ಬಿ. (ಸ್ಥಾಪಕ ಹಾಗೂ ಧರ್ಮದರ್ಶಿ) ಮತ್ತು ವಿನೋದ್ (ಕಾರ್ಯದರ್ಶಿ)ಇವರುಗಳ ಪ್ರಕಾರ ಮಾನಸಿಕ ರೋಗಿಗಳಲ್ಲಿ ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿ ಅವರ ಮನಸ್ಸಿನ ಮೇಲೆ ಉಂಟಾದ ಒತ್ತಡದ ಕಾರಣದಿಂದ ಚಿತ್ತವೈಕಲ್ಯದಿಂದ ನರಳುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಒತ್ತಡ ನಿಭಾವಣೆಯ ಬಗ್ಗೆ ಸಲಹೆ,ಮಾರ್ಗದರ್ಶನ ನೀಡಿದಲ್ಲಿ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಆ ಸಲುವಾಗಿ ಸಂಸ್ಥೆಯು ಕರ್ನಾಟಕದ ಯಾವುದೇ ಮೂಲೆಯ ಶಾಲೆಯವರು 'ಆಪ್ತ ಸಲಹೆ' (ಕೌನ್ಸಿಲಿಂಗ್) ನೀಡಲು ಆಹ್ವಾನಿಸಿದಲ್ಲಿ ಅಲ್ಲಿಗೆ ತೆರಳಿ ಮಕ್ಕಳಲ್ಲಿ ಒತ್ತಡ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂಸ್ಥೆಯು ನೀಡುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ನಮ್ಮ ರಾಜ್ಯದ ಮಾನಸಿಕ ರೋಗಿಗಳಿಗಿಂತ  ಹೊರರಾಜ್ಯಗಳಿಂದ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಚಿಂತಿಸಬೇಕಾಗಿದೆ. ಹೊರರಾಜ್ಯಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಕರೆತಂದು ಕರ್ನಾಟಕದಲ್ಲಿ ಬಿಡಲಾಗುತ್ತಿದೆ. ಆದ್ದರಿಂದ ಗಡಿಭಾಗದ ಚೆಕ್ ಪೋಸ್ಟುಗಳಲ್ಲಿ ಸೂಕ್ತ ತಪಾಸಣೆ ನಡೆದಲ್ಲಿ ಇದನ್ನು ತಡೆಗಟ್ಟಬಹುದು. ಆಗ ನಮ್ಮ ರಾಜ್ಯದ ಮಾನಸಿಕ ರೋಗಿಗಳತ್ತ ಹೆಚ್ಚು ಗಮನ ನೀಡಬಹುದು.

ಸಂಸ್ಥೆಯ ಈ ಸಮಾಜ ಸೇವಾ ಕಾರ್ಯಕ್ಕೆ ಸಹಾಯಹಸ್ತ ನೀಡ ಬಯಸುವವರು ಹಾಗೂ ಸೇವೆಯ ಸದುಪಯೋಗಪಡಿಸಿಕೊಳ್ಳಬಯಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ದೂ.ಸಂ. 8951136638
            8951184978
            8904423233
            9008847457

ಗುರುವಾರ, ಏಪ್ರಿಲ್ 28, 2011

ಹಾಯಿಕುಗಳು

ಮನದ ಮಾತು 
ಹೇಳಬಂದೆ....ನೀನಿಲ್ಲ
ಮಾತು ಬರಿದು 

--------------------------------------

ಕಡಲಾಳದ 
ಮುತ್ತಿಗಿಂತ ಅದ್ಭುತ 
ನೀ ಕೊಟ್ಟ 'ಮುತ್ತು'

--------------------------------------

ನಿನ್ನ ನಯನ 
ನನ್ನನ್ನೇ ನೋಡುತಿವೆ 
ಮೆಳ್ಳಗಣ್ಣೇನು!!??

-------------------------------------



ಶುಕ್ರವಾರ, ಏಪ್ರಿಲ್ 22, 2011

ಅವಳ ಮನದಾಳ-೦೩

ನೆನಪು 


ಎಲ್ಲಿರುವೆ ಓ ನಲ್ಲ 
ನೀ ಹೊರಿಸಿ ಹೋದ ನೆನಪುಗಳಮೂಟೆ 
ನಾ ಹೊರಲಾರದೇ ಹೊತ್ತಿರುವೆ 


ನನ್ನೊಡನೆ ನೀ ನಡೆದ ಹಾದಿ 
ಕೈ ಹಿಡಿದು ಬರಸೆಳೆದು ಮುತ್ತಿಟ್ಟ 
ಕ್ಷಣ ಕಣ್ಣ ಮುಂದೆ ಹಾಗೇ ಇದೆ 


ಕೊಟ್ಟಮಾತನು ತಪ್ಪಿ 
ಕಾಣೆಯಾಗಿ ಹೊರಟುಹೋದೆ 
ನಾ ಹೇಗೆ ಬದುಕಲಿ ನೀನೇ ಇಲ್ಲದೇ!!??


ಆ ನಿನ್ನ ಮೀಸೆಯಂಚಿನ ಮಂದಹಾಸ
ಮರೆಯುವುದಾದರೂ ಹೇಗೆ?
ತಿಳಿಯಲಾರದೆ ನಾನು ಚಡಪಡಿಸುತಿರುವೆ 


ನಿನ್ನ ಮರೆಯುವ ಬಗೆಯ ನೀನೇ ತಿಳಿಸು ಇನಿಯ 
ಅರಿಯದಾಗಿಹೆ ನಾನು ಮರೆವ ಬಗೆಯನ್ನು 
ಹೊರೆ ಇಳಿಸಿ ಹೊರಹೋಗು ಹೃದಯದಿಂದ 









ಗುರುವಾರ, ಏಪ್ರಿಲ್ 14, 2011

ಅವಳ ಮನದಾಳ-೦೨

ದ್ವಂದ್ವ

ಹುಡುಕುತ್ತಾ ಬಂದ ಸೋಲುಗಳು ನನ್ನ
ಜೀವಂತ ಶವವಾಗಿಸಿದವು 
ನಾ ಬದುಕಿದ್ದೇನೆ ಅಷ್ಟೇ...
ನನ್ನೊಳಗೆ ನಾನಿಲ್ಲ...


ನನ್ನೀ ಬಾಳಲ್ಲಿ ನಲ್ಲ ನೀ ಬಂದೆ 
ಬತ್ತಿಹೋದ ಹೃದಯದಲಿ ಒಲವನ್ನು ತಂದೆ
ಉಸಿರಾಯ್ತು ಪ್ರೀತಿ
ಈಗ ಅದೇ ಪ್ರೀತಿ ಉಸಿರು ಕಟ್ಟಿಸಿದೆ 


ಮಿದುವಾದ ತನು-ಮನ, ವಂಚಿಸುವ ಜನ
ಹಿತನುಡಿಯನಾಡಿ ಓಡಿಹೋದ ಗೆಳೆಯ
ಮಾಗಿದ ಮನದಲ್ಲಿ ಮೊಗ್ಗಾದ ಹರೆಯ 
ಇಂದೇಕೋ ಮನಸು ಭಿನ್ನ-ಖಿನ್ನ

ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ 
ನೀ ಮರಳಿ ಬರುವೆಯಾ!!!??
ಪ್ರಶ್ನೆ ಹಾಗೆ ಉಳಿದಿದೆ, ಒಳಗೇನೋ ದ್ವಂದ್ವ 



ಮಂಗಳವಾರ, ಏಪ್ರಿಲ್ 12, 2011

ಅವಳ ಮನದಾಳ -೦೧

 ಅರ್ಪಣೆ 

ಹೃದಯಾಂತರಾಳದಲಿ ಉದಯಿಸುವುದೇ ಪ್ರೀತಿ 
ಸ್ನೇಹದ ಸಾಗರದಲಿ ಯಾನ ಆರಂಭಿಸಿ 
ಚಿಮ್ಮುತಿರುವ ತೆರೆಗಳಾ ರೀತಿ 
ಸುನಾಮಿ ಅಪ್ಪಳಿಸೀತೆ ಎಂದೊಳಗೊಳಗೆ ಭೀತಿ 
ನನ್ನ ಪ್ರೀತಿಯ ಲೇಪನ ನಿನಗಿದೋ 
ಅರ್ಪಣೆ- ಇತಿ 





ಭಾನುವಾರ, ಏಪ್ರಿಲ್ 10, 2011

ಕ್ರಿ"ಕೆಟ್ಟಾ"ಟ

               ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್  ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ. 

             ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.

                      ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ. 
 
                      ನನ್ನ ವಾದದಲ್ಲಿ ಕೆಲವರಿಗೆ ಹುಳುಕು ಕಾಣಿಸಬಹುದು. ಕೋಟ್ಯಾಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿ ತಮ್ಮೆಲ್ಲ busy schedule ಗಳ ನಡುವೆಯೂ ಕ್ರೀಡಾಂಗಣದಲ್ಲಿ ಕುಳಿತು ತಾವು ಖರೀದಿಸಿದ ಮಾಲು (ಆಟಗಾರರು)ಗಳನ್ನು ಹುರಿದುಂಬಿಸುತ್ತಾ enjoy ಮಾಡುವ ಈ ಹಣದ ಥೈಲಿಗಳು ತಮಗಿಷ್ಟ ಬಂದ ಆಟಗಾರರನ್ನು ಖರೀದಿ ಮಾಡಿದರೆ ಇವನಿಗೇನು ಕಷ್ಟ ಎಂದು ಕೆಲವರು ಹಿಡಿಶಾಪ ಹಾಕಲೂಬಹುದು. ಆದರೆ ನನ್ನ ಸಲಹೆ ಇಷ್ಟೇ....ಐಪಿಎಲ್ ಆಡಳಿತ ಮಂಡಳಿಯವರು ದಯಮಾಡಿ ಈ ತಂಡಗಳಿಗೆ ಪ್ರಾಂತೀಯ ಹೆಸರುಗಳನ್ನು ಇಡುವ ಬದಲು ಕ್ಲಬ್ಬುಗಳನ್ನಾಗಿ ಪರಿವರ್ತಿಸಿದರೆ ನಾನೂ ಸೇರಿದಂತೆ ಯಾರೊಬ್ಬರೂ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ನಿಮ್ಮ ವ್ಯಾಪಾರ- (ಅ) ವ್ಯವಹಾರಗಳೂ ಸಾಂಗೋಪಾಂಗವಾಗಿ ಸಾಗುತ್ತವೆ.

                        ಕ್ರಿಕೆಟ್ ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದರಲ್ಲೂ ಭಾರತದಲ್ಲಿ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಸೇರಿದಂತೆ ಬೇರಾವುದೇ ಆಟಕ್ಕೆ ಸಿಗದ ಮನ್ನಣೆ, ಪುರಸ್ಕಾರಗಳು ಕ್ರಿಕೆಟ್ ಆಟಕ್ಕೆ, ಆಟಗಾರರಿಗೆ ಲಭ್ಯ. ಯಡಿಯೂರಪ್ಪನಂಥಹ   ಮಠ-ಮಂದಿರೋದ್ಧಾರಕ ಮುಖ್ಯಮಂತ್ರಿಯೂ ಕ್ರಿಕೆಟಿಗರಿಗೆ ಸೈಟು-ಹಣ ಹಂಚಲು ನಿಂತುಬಿಡುತ್ತಾರೆ. ಪ್ರವಾಹ ಪೀಡಿತ,ಬರ ಪೀಡಿತ ನಿರಾಶ್ರಿತ ಬಡವನಿಗೆ ಸೂರು ನೀಡದ ಈ ಶೂರ ಮಹಲುಗಳಲ್ಲಿ ವಾಸಿಸುವ ಕ್ರಿಕೆಟಿಗರಿಗೆ ತುಂಡುಭೂಮಿ ಹಂಚಲು ತಯಾರಾಗುತ್ತಾನೆಂದರೆ ಕ್ರಿಕೆಟ್ ಎಂಥಹ ಸಮೂಹಸನ್ನಿ ಆಟ ಎಂದನ್ನಿಸುತ್ತದೆ. 

                            ನಮ್ಮ ನಾಡಿನಿಂದ ಇಷ್ಟೆಲ್ಲಾ ಸವಲತ್ತುಗಳು, ಪ್ರೀತಿ, ಅಭಿಮಾನ ಎಲ್ಲವನ್ನೂ ಅನುಭವಿಸುವ ನಮ್ಮ ಕ್ರಿಕೆಟಿಗರು ಮೊನ್ನೆ ನಮ್ಮ ನೆಚ್ಚಿನ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುಧ್ಧ ಸಮರ ಸಾರಿದಾಗ ಅತ್ತ ಕಡೆ ತಲೆಹಾಕಲಿಲ್ಲ. ಏಕೆಂದರೆ ಅವರು ಐಪಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ.  

                              ಇಷ್ಟೆಲ್ಲಾ ಆದರೂ ನಾವು ಐಪಿಎಲ್ ನೋಡುವುದು ಮಾತ್ರ ಬಿಡುವುದಿಲ್ಲ. ಲಲಿತ್ ಮೋದಿ ಎಂಬ ಮಹಾನ್ ಭ್ರಷ್ಟ ಎಲ್ಲಿಂದಲೋ ಕದ್ದು (ಇಂಗ್ಲಿಷ್ ಕೌಂಟಿ) ತಂದು ನೆಟ್ಟ ಕ್ರಿ"ಕೆಟ್ಟಾ"ಟ ಜನರ ಮೋಜಿಗೆ, ಸಿರಿವಂತರ ಜೂಜಿಗೆ, ಕಪ್ಪು-ಬಿಳುಪಿನ ಕಣ್ಣಾಮುಚ್ಚಾಲೆಗೆ ಹೀಗೆ ಹತ್ತು-ಹಲವು ಬಗೆಯಲ್ಲಿ ಫಲ ಕೊಡುತ್ತಿದೆ. ಇಲ್ಲಿ ದೋಚಿದ ಮೋದಿ ಅಲ್ಲಿ ಮತ್ತೊಂದು ದೇಶದಲ್ಲಿ ಐಪಿಎಲ್ ನಂತೆಯೇ ಟೂರ್ನಿಯೊಂದನ್ನು ಆಯೋಜಿಸಿ ಹಣ ದೋಚುವ ಯೋಚನೆಯಲ್ಲಿ ಮಗ್ನನಾಗಿದ್ದಾನೆ. ಅದರಲ್ಲಿ ಸಫಲನೂ ಆಗುತ್ತಾನೆ. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಗಾದೆ ಮಾತಿಗೆ ಹೊಸ ನಿದರ್ಶನ ನೀಡುತ್ತಾನೆ.

                                   ಅಯ್ಯೋ ಬರೀತಾ ಬರೀತಾ ಟೈಮು ಹೋದದ್ದೇ ತಿಳೀಲಿಲ್ಲ , ಬರ್ತೀನಿ ಟೈಮಾಯ್ತು ಟಿವಿಯಲ್ಲಿ ಐಪಿಎಲ್ ಮ್ಯಾಚಿದೆ. ಇವತ್ತು ತೆಂಡೂಲ್ಕರ್ ಸೆಹ್ವಾಗ್ ಗೆ ಪಾಠ ಕಲಿಸ್ತಾನೆ, ಯುವರಾಜ್ ಗೆದ್ದರೆ ಪ್ರೀತಿ ಜಿಂಟಾ ಮುತ್ತು ಕೊಡೋಲ್ಲ ಶಾಪ ಹಾಕ್ತಾಳೆ ಯಾಕಂದ್ರೆ ಅವನು ಈಗ ಬೇರೆ ಟೀಮು- ಇದು ಐಪಿಎಲ್ಲಿನ ಲೇಟೆಸ್ಟ್ ಥೀಮು.