ಬುಧವಾರ, ಫೆಬ್ರವರಿ 8, 2012

ಅವಿವೇಕ - ಅತಿರೇಕ

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ 
ವಿ.ಭಟ್ : ಹೇಳಿ ವಿಜಯ್ 
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ.ನಂದೊಂದು request ನೀವು ತೋರಿಸ್ತಾ ಇರೋ     ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ. 
ವಿ.ಭಟ್ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ ...... blur ಮಾಡ್ಬೇಡಿ ಹಾಗೇ ತೋರಿಸಿ ಅಂತ. 
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ವಿ.ಭಟ್ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ. 
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ........ ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ - ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ..... ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ
ವಿ.ಭಟ್ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ 
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ .......

                                  ಇಷ್ಟು ಹೇಳಿ ನಾನು ಫೋನ್ disconnect ಮಾಡಿದೆ. ಇದಿಷ್ಟೂ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಯ ಸಮಯದಲ್ಲಿ. ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲರ ಕೀಳು ಅಭಿರುಚಿ ಇಷ್ಟಕ್ಕೆಲ್ಲ ಕಾರಣ. ವಿಧಾನಸಭೆಯ ಕಲಾಪದ ಸಮಯದಲ್ಲಿ ಕಾಮಕೇಳಿಯ ವೀಡಿಯೊ ನೋಡುತ್ತಿದ್ದ ಈ ಪುಡಾರಿಗಳ ನಿಜ ಬಣ್ಣ ಬಯಲು ಮಾಡಿದ ಮಾಧ್ಯಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. 
  
                                24  X 7 ನ್ಯೂಸ್ ಚಾನಲ್ಲುಗಳ ಸಂಖ್ಯೆ ಹೆಚ್ಚಿದಂತೆ TRP (Target rating point ) ಸಮರ ಹೆಚ್ಚುತ್ತಿದೆ. ದಿನವಿಡೀ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಅನಿವಾರ್ಯತೆ ಎದುರಿಸುತ್ತಿರುವ ನ್ಯೂಸ್ ಚಾನಲ್ಲುಗಳು ಇಂತಹ ಗಿಮಿಕ್ಕುಗಳಿಗೆ ಇಳಿಯುತ್ತವೆ. "ನೇರ, ದಿಟ್ಟ , ನಿರಂತರ" ಸುದ್ದಿ ಬಿತ್ತರಿಸುವ ಭರದಲ್ಲಿ ಮಾಧ್ಯಮಗಳಿಗೆ ಇರಬೇಕಾದ ಸಾಮಾಜಿಕ ಕಾಳಜಿ, ಪತ್ರಿಕಾ ಧರ್ಮ, ನೀತಿ ನಿಯಮಗಳನ್ನು ಮರೆಯುತ್ತವೆ. 

                                ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನಿಜಕ್ಕೂ ಅಸಹ್ಯಕರ. ಆದರೆ ಇಂತಹ ಅಸಹ್ಯಗಳು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಹಲವು ಬಾರಿ ನಡೆದಿವೆ. ಹಣದ ಆಸೆಗೆ ಬಿದ್ದು ತಮ್ಮನ್ನೇ ಮಾರಿಕೊಂಡ ಸಂಸದರು, ಲೋಕಸಭೆಯಲ್ಲಿ ಲೋಕಪಾಲ್ ಮಸೂದೆಯ ಪ್ರತಿಯನ್ನು ಹರಿದೆಸೆದ ಸಂಸದರು, ವಿಧಾನಸಭೆಯಲ್ಲಿ ಕುರ್ಚಿಗಳನ್ನು,ಚಪ್ಪಲಿಗಳನ್ನೂ ಎಸೆದಾಡಿದ ಶಾಸಕರು ....ಒಂದೆರಡಲ್ಲ ಹತ್ತಾರು ಉದಾಹರಣೆಗಳನ್ನು ನಮ್ಮ ದೇಶದ ರಾಜಕಾರಣಿಗಳು ನಮಗಾಗಿ ಇತಿಹಾಸದಲ್ಲಿ ಉಳಿಸಿದ್ದಾರೆ. 

                                ಬೇರೆಯವರು ಮಾಡಿದ ತಪ್ಪನ್ನು ತೋರಿಸುವ ಭರದಲ್ಲಿ ನಾವೂ ತಪ್ಪು ಹಾದಿ ತುಳಿಯದಂತೆ ಎಚ್ಚರವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಯಾರೋ ಮಾಡಿದ ಅವಿವೇಕಕ್ಕೆ ಅತಿರೇಕದ ಸುದ್ದಿ ಬಿತ್ತರಿಸುವುದು ಸರಿಯಲ್ಲ.  ಇನ್ನಾದರೂ ನಮ್ಮ 24 X  7 ಸುದ್ದಿವಾಹಿನಿಗಳು ಎಚ್ಚೆತ್ತುಕೊಂಡು ಕೇವಲ ಮಾರುಕಟ್ಟೆ ದೃಷ್ಟಿಯಿಂದ ಹೊರಬಂದು ಮಾಧ್ಯಮಗಳ ಘನತೆಯನ್ನು ಎತ್ತಿಹಿಡಿಯಬೇಕಿದೆ.

ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

ಅದೊಂದು ಉದ್ಯಾನ
ಉದ್ಯಾನದೊಳಗೊಂದು
ಮಹಾತ್ಮನ ಪ್ರತಿಮೆ

ಮಹಾತ್ಮನೆಡೆಗೆ ನಿರ್ಲಿಪ್ತ ನೋಟ 
ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ
ತನ್ನಲ್ಲೇ ಏನನ್ನೋ ಹೇಳಿಕೊಳ್ಳುತ್ತಾ

ಅಯ್ಯಾ ನನಗೀಗ ವಯಸ್ಸು ಎಂಭತ್ತು
ನೀ ಎಂಭತ್ತರ ಹೊಸ್ತಿಲಲ್ಲೇ ಗುಂಡೇಟಿಗೆ 
ನಿನ್ನ ಗುಂಡಿಗೆಯ ಕೊಟ್ಟೆ 

ಅಷ್ಟರಲ್ಲಾಗಲೇ ನೀ 
ಮಹಾತ್ಮನಾಗಿದ್ದೆ, ಜನಮಾನಸದಲ್ಲಿ 
ಮನೆಯ ಮಾಡಿದ್ದೆ 

ನಾನಿಂದು ಬದುಕಿದ್ದೇನೆ 
ಭೂಮಿಗೆ ಭಾರವಾಗಿ, ಮನೆಯವರಿಗೆ
ಬೇಡವಾಗಿ.......ತೊಡಕಾಗಿ 

ಸತ್ವಹೀನ ನನ್ನ ಬದುಕು-
ಸತ್ಯಕ್ಕೆ ನೀನಾದೆ ಬೆಳಕು, 
ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ  

"ನೀ ಮಹಾತ್ಮನಾಗದಿದ್ದರೆ ಏನಂತೆ  ನೀ 
ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
 ಬದುಕಿರುವವರೆಗೂ ನೀ ನಗುನಗುತಾ ಬದುಕು"

ಅಶರೀರವಾಣಿಯೊಂದು ನುಡಿದ ಹಾಗಾಗಿ
ವೃದ್ದ ತಾ ಬೆರಗಾಗಿ ಸಾಗಿದನು ಮನೆಯತ್ತ 
ಆನಂದವಾಗಿ.............






ಸೋಮವಾರ, ಡಿಸೆಂಬರ್ 26, 2011

ನಿನ್ನ ಪ್ರೇಮದ ಪರಿ.......


ಹಲವರು ಹೇಳುತ್ತಾರೆ ಪ್ರೀತಿ ಕುರುಡು
ಕೆಲವರು ಹೇಳುತ್ತಾರೆ ಪ್ರೀತಿ ಕಿವುಡು


ಪ್ರೀತಿ ಕುರುಡೋ- ಕಿವುಡೋ
ನಾನರಿಯೆ ನಲ್ಲೆ
ಒಂದಂತು ನಾ ಬಲ್ಲೆ
ನೀನಿರದ, ನಿನ್ನ ಒಲವಿರದ .
ಬದುಕು ಬರಡು - ಕನಸು ಬರಿದು


ನೀ ನನ್ನೆಡೆಗೆ ತೋರುವ 
ಅಗಾಧ ಪ್ರೀತಿಯ ಕಂಡು 
ನಾ ಬೆರಗಾದೆ
ನಿನ್ನೊಲವಿನ ಪರಿಗೆ 
ನೀ ತೋರುವ ಕಾಳಜಿಗೆ ನಾ ಮರುಳಾದೆ


ಪ್ರೀತಿ ಕುರುಡಲ್ಲ- ಕಿವುಡಲ್ಲ
ನೋಡುವ ಕಂಗಳು ಕಣ್ಣಿದ್ದೂ ಕುರುಡಾದುವಲ್ಲ 



 

ಶನಿವಾರ, ಅಕ್ಟೋಬರ್ 8, 2011

ಹೋಳಿ ಹಬ್ಬದಂದು ನಮ್ಮ ಗೋಳಿನ ಕಥೆ

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು, ಅವತ್ತು ಹೋಳಿ ಹಬ್ಬದ ದಿನ. ಬೆಳಿಗ್ಗೆಯಿಂದಲೇ ಎಲ್ಲೆಲ್ಲೂ ಬಣ್ಣದ ಓಕುಳಿಯಾಟ. ನಾನಾಗ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸ್ಟೂಡೆಂಟು. ಮಾಮೂಲಿನಂತೆ ಆ ದಿನವೂ ಕಾಲೇಜಿಗೆ ಹೋಗಿದ್ದೆ. ಆದರೆ ಅಂದು ಕಾಲೇಜ್ ಕ್ಯಾಂಪಸ್ ಕಲರ್ ಫುಲ್ಲಾಗಿ ಕಂಗೊಳಿಸ್ತಿತ್ತು. ನಾನಾಗ ತುಂಬಾ ಸೈಲೆಂಟ್ ಹುಡ್ಗ(ಇದು ಹದಿನಾರಾಣೆ ಸತ್ಯ ಸ್ವಾಮಿ ಧರ್ಮಸ್ಥಳಕ್ಕೆ ಬೇಕಾದ್ರೂ ಬರ್ತೀನಿ,ನೀವು ನಂಬ್ಲೇಬೇಕು). ಆದ್ರೆ ನನ್ ಕ್ಲೋಸ್ ಫ್ರೆಂಡ್ ಒಬ್ಬ ಇದ್ದ ಆಂಬ್ರೋಸ್ ಅಂತ. ಅವನು ಸಖತ್ ತರ್ಲೆ. ಅವನೂ ಜೇಬಿನ ತುಂಬಾ ಬಣ್ಣದ ಪ್ಯಾಕೆಟ್ ತುಂಬಿಕೊಂಡು ಬಂದಿದ್ದ. ನಮಗೆಲ್ಲಾ ಬಳಿದು ಅವ್ನು ಬಳ್ಕೊಂಡು ಎಂಜಾಯ್ ಮಾಡಿದ. ಮಧ್ಯಾಹ್ನ ಹನ್ನೆರಡು ಘಂಟೆ ಹೊತ್ತಿಗೆ ನಾನು ಮನೆಗೆ ಹೋಗೋಣ ನಡೀ ಅಂತ ಆಂಬ್ರೋಸ್ ಜೊತೆ ಸಿಟಿ ಬಸ್ ಸ್ಟಾಂಡಿಗೆ ಹೊರಟೆ.
                         
                           ದೇವರಾಜ ಅರಸು ರಸ್ತೆ ಯಲ್ಲಿ ನಾವಿಬ್ರು ನಡ್ಕೊಂಡು ಬರ್ತಾ ಇದ್ವಿ. ಆಗ ಇಬ್ರು ಫಾರಿನ್ನರ್ಸು (ಅಚ್ಚಕನ್ನಡದಲ್ಲಿ ಪರದೇಶಿಗಳು) ನಮ್ಮ ಬಣ್ಣದ ವೇಷ ನೋಡಿ ನಮ್ ಜೊತೆ ಫೋಟೋ ತೆಗೆಸ್ಕೊಂಡರು. ನಾವು ಅವ್ರ ಹತ್ರ ಸ್ವಲ್ಪ ಟಸ್ ಪುಸ್ ಅಂತ ಇಂಗ್ಲೀಷ್ ಮಾತಾಡಿ ಮುಂದಕ್ಕೆ ಹೊರಟ್ವಿ  ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಪ್ರಜಾವಾಣಿ ಆಫೀಸು. ಅಡ್ಡರಸ್ತೆಯಲ್ಲಿ ನಡ್ಕೊಂಡು ಹೋಗಿ ಮಹಾರಾಣಿ ಜ್ಯೂನಿಯರ್ ಕಾಲೇಜ್ ಮುಂದೆ ಬಂದ್ವಿ. ನಾನು ಆಂಬ್ರೋಸ್ ಹತ್ರ ಏನೋ ಹೇಳ್ತಾ ನಡ್ಕೊಂಡು ಹೋಗ್ತಾ ಇದ್ದೆ. ಇವನು ಹಿಂದೇನೆ ನಿಂತುಬಿಟ್ಟಿದ್ದಾನೆ. ತಿರುಗಿನೋಡಿದ್ರೆ ಮಹಾರಾಣಿ ಕಾಲೇಜ್ ಗೇಟ್ ಮುಂದೆ ನಿಂತ್ಕೊಂಡು ಯಾವ್ದೋ ಹುಡುಗಿಗೆ hoy ಹೇಳೋ ರೀತೀಲಿ ಕೈ ತೋರಿಸ್ತಾ ಇದ್ದ. ನಾನು ಹಿಂದಕ್ಕೆ ಬಂದು ಅವನ್ನ ಎಳ್ಕೊಂಡು 'ಬಾರೋ ಮಗಾ ಇವತ್ತು ಎಲ್ಲಾ ಕಡೆ ಸ್ಕ್ವಾಡ್ ಇರ್ತಾರೆ' ಅಂತ ಹೇಳ್ದೆ. ಅಷ್ಟರಲ್ಲಿ ಮಫ್ತಿಯಲ್ಲಿದ್ದ ಪೋಲಿಸ್ ಒಬ್ಬ ಬಂದು ನಮ್ಮಿಬ್ಬರನ್ನೂ ಹಿಡ್ಕೊಂಡ. ನಂಗೆ ಕೈಕಾಲು shake ಆಗೋಕೆ ಶುರುವಾಯ್ತು. 'ಸರ್ ನಂಗೇನೂ ಗೊತ್ತಿಲ್ಲ ಸರ್ ಇವ್ನು ಅದ್ಯಾರೋ ಹುಡ್ಗಿಗೆ ಕೈ ತೋರಿಸ್ತಿದ್ದ, ನಾನು ಬೇಡ ಬಾ ಅಂತ ಕರದೆ ಅಷ್ಟೇ, ಬೇಕಾದ್ರೆ ಚೆಕ್ ಮಾಡ್ಕೊಳ್ಳಿ ಸರ್ ನನ್ ಹತ್ರ ಬಣ್ಣ ಕೂಡಾ ಇಲ್ಲ ಸರ್' ಅಂತ ಪೋಲಿಸ್ ಹತ್ರ ಅಂಗಲಾಚಿದೆ. ಆಂಬ್ರೋಸ್ 'ಆ ಹುಡ್ಗಿ ನನ್ ತಂಗಿ ಸರ್' ಅಂತ ಸುಳ್ಳು ಹೇಳ್ದ. 'ಆಯ್ತು ನಡೀರಿ ಸ್ಟೇಷನ್ ಗೆ ಹೋಗೋಣ, ಅದ್ನೇ ಸಾಹೇಬ್ರ ಹತ್ರ ಹೇಳಿ ಬಿಟ್ಬಿಡ್ತಾರೆ' ಅಂತ ಹೇಳಿದ ಪೋಲಿಸ್ ಆಟೋ ಒಂದಕ್ಕೆ ನಮ್ಮಿಬ್ಬರನ್ನು ಹತ್ತಿಸಿ ತಾನೂ ಕೂತ್ಕೊಂಡ. ಆಗ ದೇವರಾಜ ಪೋಲಿಸ್ ಸ್ಟೇಷನ್ ದೇವರಾಜ ಮಾರ್ಕೆಟ್ ಬಿಲ್ಡಿಂಗ್ನಲ್ಲಿ ಇತ್ತು.  ಆಟೋ ಸೀದಾ ಹೋಗಿ ದೇವರಾಜ ಪೋಲಿಸ್ ಸ್ಟೇಷನ್ ಹತ್ರ ನಿಲ್ತು. ನಾವು ಆಟೋ ಇಂದ ಕೆಳಗೆ ಇಳಿದ್ವಿ. 'ಆಟೋದವನಿಗೆ ದುಡ್ಡು ಕೊಡು' ಅಂದ್ರು ಪೋಲಿಸ್. ನಾನು ಜೇಬಿಂದ ಹತ್ತರ ನೋಟೊಂದು ತೆಗೆದು ಆಟೋ ಡ್ರೈವರಿಗೆ ಕೊಟ್ಟೆ.ಪೋಲಿಸ್ ಜೊತೆ ನಾನು ನನ್ನ ಲೈಫಲ್ಲಿ ಮೊದಲ ಸಲ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದೆ. ಮೆಟ್ಟಿಲು ಅನ್ನೋದಕ್ಕಿಂತ 'ಮೆಟ್ಟಿಲುಗಳು' ಅಂದ್ರೆ ಸೂಕ್ತ, ಯಾಕಂದ್ರೆ ಪೋಲಿಸ್ ಸ್ಟೇಷನ್ ಇದ್ದಿದ್ದು ಮೊದಲನೇ ಮಹಡಿಯಲ್ಲಿ.
              
                  ಮನಸ್ಸಿನ ಒಳಗೆ ಅವ್ಯಕ್ತ ಭಯ. ಪೋಲಿಸ್ ಸ್ಟೇಷನ್ ಹೇಗಿರುತ್ತೆ ಅಂತ ಫಿಲ್ಮುಗಳಲ್ಲಿ ಮಾತ್ರ ನೋಡಿದ್ದ ನಂಗೆ ನಮ್ಮನ್ನು ಸೀದಾ ಒದ್ದು ಒಳಗೆ ಹಾಕ್ತಾರೆ, ಸರಳುಗಳ ಹಿಂದೆ ಸೆರೆಯಾಗಬೇಕು, ನ್ಯೂಸ್ ಪೇಪರಿನಲ್ಲಿ ಬರುತ್ತೆ ಹಾಗೇ-ಹೀಗೆ ಅಂತ ಮನಸ್ಸು ವಿಚಿತ್ರ ಯೋಚನೆಗಳಿಗೆ ಶುರು ಇಟ್ಟುಕೊಂಡ್ತು. ನಾನು ಎಡಗಾಲಿಟ್ಟು ಸ್ಟೇಷನ್ ಒಳಗೆ ಹೋದೆ. ಅದಾಗಲೇ ಏಳೆಂಟು ಹುಡುಗರನ್ನ ಬೆಂಚಿನ ಮೇಲೆ ಸಾಲಾಗಿ ಕೂರಿಸಿದ್ರು. ಎಲ್ಲಾ ಹುಡುಗ್ರು 'ಬಣ್ಣದ ವೇಷ' ಹಾಕ್ಕೊಂಡಿದ್ರು. ನಮ್ಮನ್ನೂ ಅವರ ಜೊತೆ ಕೂರೋಕೆ ಹೇಳಿದ್ರು. ನಾನು ಆಂಬ್ರೋಸ್ ಗೆ ಹಿಡಿಶಾಪ ಹಾಕ್ತಾ ಕೂತ್ಕೊಂಡೆ. ಅಕ್ಕ-ಪಕ್ಕದ ಹುಡುಗರು ನಮ್ಮ ಜೊತೆ ಕಷ್ಟ-ಸುಖ ಹಂಚಿಕೊಂಡರು.

                 ನಾನು ಅವಾಗವಾಗ 'ಸರ್ ಬಿಟ್ಬಿಡಿ ಸರ್ ಪ್ಲೀಸ್' ಅಂತ ಪೋಲೀಸರ ಹತ್ರ request ಮಾಡ್ತಾ ಇದ್ದೆ. ಅವರು ಕಿವಿ ಕೇಳದೆ ಇರೋ ಥರಾ ಓಡಾಡ್ತಾ ಇದ್ರು. ಸುಮಾರು ಒಂದು ಘಂಟೆ ಸಮಯ ಇಬ್ಬರು ದಡೂತಿ ಪೊಲೀಸರು ಬಂದವ್ರೇ 'ಎಲ್ಲೋ ಆ ಸೂ..........ಮಕ್ಕಳು procession ನಲ್ಲಿ ಅದೂ police protection ಇದ್ರೂ ಬಣ್ಣ ಹಾಕ್ತಾರೆ' ಅಂತ ಅಬ್ಬರಿಸ್ತಾ ಬಂದು ನಮ್ಮ ಹಿಂದಿನ ಸಾಲಲ್ಲಿ ಕೂತಿದ್ದ ಇಬ್ರು ಹುಡುಗರಿಗೆ ಎಗ್ಗಾ ಮಗ್ಗಾ ಚಚ್ಚಿದ್ರು......ಬಾಯಿಬಿಟ್ರೆ ಬರೀ ಕೆಟ್ಟಪದಗಳ ಸುರಿಮಳೆ. ಆ ಇಬ್ಬರು ಹುಡುಗರಲ್ಲಿ ಒಬ್ಬ ಸಣಕಲ, ಒಬ್ಬ ದಡಿಯ. ಸಣಕಲನಿಗೆ ಕಡಿಮೆ ಏಟು ದಡಿಯನಿಗೆ ಜಾಸ್ತಿ ಏಟು ಬೀಳ್ತಾ ಇತ್ತು.ಅವರಿಬ್ಬರೂ ಜಿಲ್ಲಾಧಿಕಾರಿ ಕಛೇರಿಗೆ procession ಹೊರಟಿದ್ದ ಮೆಡಿಕಲ್ ಕಾಲೇಜ್ ಸ್ಟೂಡೆಂಟುಗಳಿಗೆ ಬಣ್ಣ ಹಚ್ಚಿ ಸಿಕ್ಕಿಬಿದ್ದಿದ್ರು...ನಂಗೆ ಭಯ ಶುರುವಾಯ್ತು ನಾನು ಸ್ವಲ್ಪ ದಪ್ಪಗಿದ್ದೆ, ನನಗೆ ರಿಪೇರಿ ಸರಿಯಾಗಿ ಮಾಡ್ತಾರೆ ಅಂತ ಭಯ ಶುರುವಾಯ್ತು. ಛೇ ದೇವ್ರೇ ನನ್ನ ಈ ಕ್ಷಣ ಸಣ್ಣ ಮಾಡ್ಬಿಡು ಅಂತ ಕೇಳ್ಕೊಂಡೆ.ಆದ್ರೆ ದೇವ್ರು ಕಿವುಡಾಗಿದ್ದ. ಒಬ್ಬ ಪೋಲಿಸ್ ಬಂದು ಲಾಠಿ ಹಿಡಿದು ನಮಗೆಲ್ಲಾ ಕೈ ಮುಂದಕ್ಕೆ ಚಾಚಿಸಿ ತಲಾ ಎರಡೇಟು ಕೊಟ್ಟ. ನಂಗೆ ಸ್ಕೂಲಿನ ದಿನಗಳು ನೆನಪಾದವು ಆದ್ರೆ ಹೊಡೆತ ಜೋರಾಗಿತ್ತು.ನಮ್ಮ ಟೀಚರ್ ಯಾವಾಗಲೂ ಇಷ್ಟು ಜೋರಾಗಿ ಹೊಡೆದಿರಲಿಲ್ಲ. ಅವ್ರು ಕಾಲೇಜ್ ಹುಡುಗ್ರು ಜಾಸ್ತಿ ಹೊಡೀಬೇಡ ಅಂತ ಅಲ್ಲೇ ಇದ್ದ ಇನ್ನೊಬ್ಬ ಕಾನ್ಸ್ಟೇಬಲ್ ಹೇಳಿದ. ಸದ್ಯ ಬದುಕಿದೆವು ಅಂತ ಅಂದ್ಕೊಂಡೆ.

                  ಸಂಜೆ ಆಗ್ತಾ ಬಂತು. ಇನ್ಸಪೆಕ್ಟರ್ ಸಾಹೇಬರು ಬರಲೇ ಇಲ್ಲ. ಮನೇಲಿ ಅಪ್ಪ-ಅಮ್ಮ ಗಾಬರಿ ಆಗ್ತಾರೆ ಅಂತ ನಂಗೆ ಭಯ ಶುರುವಾಯ್ತು. ಮನೆಗೆ ಒಂದು ಫೋನ್ ಮಾಡ್ತೀನಿ ಅಂತ ಗೋಗರೆದೆ ಆದ್ರೆ ಅವರು ಒಪ್ಪಲಿಲ್ಲ. ಇನ್ಸ್ ಪೆಕ್ಟರ್ ಬಂದ್ರು ಸಂಜೆ ಏಳಕ್ಕೆ. ಆದ್ರೆ ಅವರು ನಮ್ಮನ್ನು 'ಕ್ಯಾರೇ' ಅನ್ನಲಿಲ್ಲ. ಒಂದು ಖುಷಿ ಏನಂದ್ರೆ ಅವರ ಹೆಸರೂ ವಿಜಯ್ ಕುಮಾರ್ ನನ್ ಹೆಸರೂ ವಿಜಯ್ ಕುಮಾರ್ ಆಗಿತ್ತು.

                  ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ಸ್ಟೇಷನ್ ಗೆ ಒಂದು ಫೋನ್ ಕಾಲ್ ಬಂತು. ಇನ್ಸ್ ಪೆಕ್ಟರ್ ಸಾಹೇಬ್ರು ಫೋನಲ್ಲಿ ಮಾತಾಡಿದ ಮೇಲೆ ನಮ್ಮ ಹತ್ರ ಬಂದು 'ನಿಮ್ಮಲ್ಲಿ ವಿಜಯ್ ಕುಮಾರ್ ಯಾರು? ಅಂತ ಕೇಳಿದ್ರು. ನಾನು ಎದ್ದು ನಿಂತೆ. ನನ್ನ ಸೀದಾ ಅವರ ಟೇಬಲ್ ಹತ್ರ ಕರ್ಕೊಂಡು ಹೋಗಿ ಏನು ಮಾಡಿದೆ ಅಂತ ಕೇಳಿದ್ರು. ನಾನು ನಡೆದ ವಿಷಯ ಅವರಿಗೆ ಹೇಳಿ ಇದೆಲ್ಲ ನನ್ ಫ್ರೆಂಡ್ ಇಂದ ಆಗಿದ್ದು ಅಂತ ಹೇಳ್ದೆ. ಅವರು ನಂಗೆ ಬುದ್ಧಿಮಾತು ಹೇಳಿ ಇಂಥ ಹುಡುಗರ ಸಹವಾಸ ಮಾಡಬೇಡ ಇನ್ನು ಮುಂದೆ, ಮನೆಗೆ ಹೋಗು ಅಂದ್ರು. ನಾನು ಅವರನ್ನೂ ಬಿಟ್ಬಿಡಿ ಸರ್ ಅಂತ request ಮಾಡಿ ಬಾಕಿ ಹುಡುಗರನ್ನೂ ಬಿಡಿಸಿದೆ.

                  ಸ್ಟೇಷನ್ ಇಂದ ಬಸ್ ಸ್ಟಾಂಡಿಗೆ ತಲುಪಿ ಬಸ್ ಹತ್ತಿ ಮನೆ ಸೇರೋ ಹೊತ್ತಿಗೆ ಹತ್ತೂವರೆ ಘಂಟೆ ಆಗಿತ್ತು. ಅಪ್ಪ-ಅಮ್ಮ ನನಗೋಸ್ಕರ ಕಾಯ್ತಾ ನಿಂತಿದ್ರು. ನಾನು ನಡೆದ ವಿಷಯ ಹೇಳಿದೆ. ಒಂದಷ್ಟು ಬೈದರು. ನಾಗಣ್ಣ ಅಂತ ಒಬ್ರು ಪೋಲಿಸ್ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡ್ತಾರೆ, ಅವ್ರು ನಮ್ ಮನೆ ಹತ್ರಾನೆ ಇರೋದು. ನಮ್ಮ ತಂದೆ ಅವರನ್ನು ಭೇಟಿ ಮಾಡಿ ಮಗ ಮನೆಗೆ ಬಂದಿಲ್ಲ ಅಂತ ಹೇಳಿದ್ದಕ್ಕೆ ಅವರು ನಮ್ಮ ಕಾಲೇಜ್ ದೇವರಾಜ ಪೋಲಿಸ್ ಸ್ಟೇಷನ್ ವ್ಯಾಪ್ತಿಗೆ ಬರೋದರಿಂದ ಒಂದು ಸಲ ಪ್ರಯತ್ನ ಮಾಡೋಣ ಅಂತ ಅಲ್ಲಿಗೆ ಫೋನ್ ಮಾಡಿ ಕೇಳಿದಾಗ ನನಗೆ ಬಿಡುಗಡೆಯ ಭಾಗ್ಯ ದೊರಕಿತು ಎಂಬಲ್ಲಿಗೆ ನನ್ನ ಜೀವನದ ಒಂದು ಹೊಸ ಅನುಭವದ ಕಥೆ ಸುಖಾಂತವಾಯಿತು.

ಮಂಗಳವಾರ, ಸೆಪ್ಟೆಂಬರ್ 27, 2011

ನಿನ್ನ ಪ್ರೀತಿಗಾಗಿಯೇ

ನೀನೇ ನನ್ನ ಒಲವು 
ನೀನೇ ನನ್ನ ಉಸಿರು 
ನೀನೇ ನನ್ನ ಹೃದಯ 
ನೀ ಸಿಕ್ಕರೇ ಬಾಳು ಧನ್ಯ 

ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 
ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 

ನಿನ್ನ ಪ್ರೀತಿಯ ರಕ್ಷಣೆ ಸಾಕು 
ವರದಕ್ಷಿಣೆ ಬೇಕಿಲ್ಲ 
ನೀ ನನಗೆ ಸಿಗದೇ ಹೋದರೆ 
ಬರೀ ಶೂನ್ಯವೇ ಬಾಳೆಲ್ಲ

ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 
ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ






ಮಂಗಳವಾರ, ಸೆಪ್ಟೆಂಬರ್ 13, 2011

ಹಾಗೇ ಉಳಿದ ಪ್ರಶ್ನೆ.....

                            ಅವರು 'ಭಗಿನಿ' ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ  ಇದ್ರು. ನಾನು ಅವರ ಮಾತನ್ನೇ ಗಮನ ಇಟ್ಟು ಕೇಳ್ತಾ ಇದ್ದೆ. ಅವರು ನಮ್ಮ ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ಅವರ ಜೊತೆ ನಾವು ನಾಲ್ಕೈದು ಮಂದಿ ಕೂತಿದ್ವಿ. ಅವರು ನಿಮಗೆಲ್ಲಾ ಒಂದು ಪ್ರಶ್ನೆ ಕೇಳ್ತೀನಿ ಯೋಚಿಸಿ ಉತ್ತರ ಕೊಡಿ ಅಂದ್ರು.  ಅವರು ಕೇಳಿದ ಪ್ರಶ್ನೆ ಹೀಗಿದೆ.


                         ಒಂದು ಊರು. ಆ ಊರಿನ ರೈಲ್ವೇ ಹಳಿಗಳ ಮೇಲೆ ಐದು ಮಕ್ಕಳು ಆಟ ಆಡ್ತಿದ್ದಾರೆ. ಐದರಲ್ಲಿ ನಾಲ್ಕು ಮಕ್ಕಳು live trackನಲ್ಲಿ ಆಡ್ತಾ ಇದ್ರು, ಒಬ್ಬ ಹುಡುಗ ಮಾತ್ರ dead trackನಲ್ಲಿ ಆಡ್ತಿದ್ದ. ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬರುತ್ತಿದೆ. ರೈಲ್ವೇ ಗಾರ್ಡ್ ಕೊನೇ ಕ್ಷಣದಲ್ಲಿ ಹಳಿಯ ಮೇಲೆ ಆಡ್ತಿರೋ ಮಕ್ಕಳನ್ನು ನೋಡ್ತಾನೆ. ಅವನ ಕೈಯಲ್ಲಿ ಲಿವರ್ ಇದೆ....ಅವನಿಗಿರುವ option ಎರಡು. ಮೊದಲನೆಯದು live trackನಲ್ಲಿ ಆಡ್ತಿರೋ ನಾಲ್ಕು ಮಕ್ಕಳನ್ನು ಬಚಾವು ಮಾಡುವುದು ಅಥವಾ ಎರಡನೆಯದು dead trackನಲ್ಲಿ ಆಡ್ತಿರೋ ಒಬ್ಬಹುಡುಗನನ್ನು ಉಳಿಸುವುದು.



                         ನೀವು ರೈಲ್ವೇ ಗಾರ್ಡ್ ಆಗಿದ್ದರೆ ನಿಮ್ಮ ನಿರ್ಧಾರ ಏನು!!!??? 


                     ನಾವು ಎಲ್ಲರೂ ಹೇಳಿದ ಉತ್ತರ ಮೊದಲನೆಯ option  ಆಗಿತ್ತು. ಯಾಕಂದ್ರೆ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ. ನಾಲ್ಕು ಮಕ್ಕಳ ಜೀವ ಉಳಿಸುವ ಸಲುವಾಗಿ ಒಂದು ಮಗುವಿನ ಜೀವ ಹೋದರೆ ತಪ್ಪೇನಿಲ್ಲ ಹಾಗಾಗಿ ಮೊದಲನೆಯ option ಸೂಕ್ತ ಎನ್ನಿಸಿತು. ಅದನ್ನೇ ನಾವೆಲ್ಲರೂ ಹೇಳಿದ್ವಿ.
                        dead track ನಲ್ಲಿ ಆಡುತ್ತಿದ್ದ ಹುಡುಗ ಅಲ್ಲಿ ರೈಲು ಬರುವುದಿಲ್ಲ ಎಂಬ ನಂಬಿಕೆಯ (!!??) ಮೇಲೆ ಅವನು ಅಲ್ಲಿ ಆಡುತ್ತಿದ್ದ, ಆದರೆ live track ನಲ್ಲಿ ಆಡುತ್ತಿದ್ದ ಹುಡುಗರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾದ ಸ್ಥಳದಲ್ಲಿ ಆಟವಾಡುತ್ತಿದ್ದರು. ಸೈದ್ದಾಂತಿಕವಾಗಿ ಯೋಚಿಸಿದಲ್ಲಿ dead track ನಲ್ಲಿ ಆಡುತ್ತಿದ್ದ ಹುಡುಗನ ಮೇಲೆ ರೈಲು ಹರಿದರೆ ಅದು ತಪ್ಪು. 
                        

                        ಇದನ್ನು ಪ್ರಜಾಪ್ರಭುತ್ವಕ್ಕೆ, ಬಹುಮತಕ್ಕೆ ಉದಾಹರಣೆಯಾಗಿ ಉಪಯೋಗಿಸಬಹುದು. ಇಲ್ಲಿ ಬಹುಜನರ ಅಭಿಪ್ರಾಯಕ್ಕೆ ಮಾನ್ಯತೆ. ಕೆಲವೊಮ್ಮೆ ಕೆಲವು ತಪ್ಪು ನಿರ್ಧಾರಗಳೂ ಮನ್ನಣೆಗೆ ಒಳಪಡುತ್ತವೆ. ಭ್ರಷ್ಟ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ.  ಕಡು ಭ್ರಷ್ಟ ವ್ಯಕ್ತಿಯೊಬ್ಬ ಪದೇ ಪದೇ ಚುನಾವಣೆಯಲ್ಲಿ ಜಯಿಸಿ ಮಂತ್ರಿಯಾಗುತ್ತಾನೆ. ಯಾರದೋ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿ ಜೈಲು ಸೇರಿದ ನಾಯಕ, ಜನನಾಯಕರ ಬಂಧನ ವಿರೋಧಿಸಿ ದಾಳಿಗಳಾಗುತ್ತವೆ, ಬಂದುಗಳಾಗುತ್ತವೆ.........ಆದರೆ ವ್ಯತ್ಯಾಸ ಒಂದೇ ................... ಅಲ್ಲಿ ನಾಲ್ವರ ಪ್ರಾಣವಾದರೂ ಉಳಿಯಿತು ಎಂಬ ಸಮಾಧಾನ ಇರುತ್ತದೆ............ಆದರೆ ಇಲ್ಲಿ !!!!!??????? ಪ್ರಶ್ನೆ ಹಾಗೇ ಉಳಿದಿದೆ.

ಬುಧವಾರ, ಜುಲೈ 27, 2011

ಯಡ್ಯೂರಪ್ಪನಿಗೆ ನೊಬೆಲ್ ಅವಾರ್ಡು

ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರ್ಲೇಬೇಕು.

ಸಿದ್ದ : ಲೇ ಕೆಂಚ ಇವತ್ತು ಪೇಪರ್ ನೋಡ್ದೆನ್ಲಾ ?
ಕೆಂಚ : ಹೂ ಕನ್ಲಾ ನೋಡ್ದೆ, ಪಾಪ ನಮ್ ಯಡ್ಯೂರಪ್ನೋರಿಗೆ ಶ್ಯಾನೆ ಕಾಟ ಕೊಡ್ತಾವ್ರೆ. ಈ ಸಂತೋಷ್ ಹೆಗ್ಡೆ                 ಲೋಕಾಯುಕ್ತ      ಆದಾಗಿಂದ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಸಂತೋಷಾನೇ ಕಾಣಾಕಿಲ್ಲ.........ಸದ್ಯ ಇನ್ನೊಂದು ವಾರಕ್ಕೆ ಆವಯ್ಯ ರಿಟೈರ್ ಆಯ್ತಾರೆ ಇನ್ನಾರಾ ನಮ್ ಸಿಎಮ್ಮು ಸುಖವಾಗಿ ಇರ್ಬೌದು ಅಂದ್ಕೊಂಡ್ರೆ ಅದೇನೋ "ಗಣಿ ಬಾಂಬ್" ಹಾಕ್ಬಿಟ್ರಲ್ಲ ಸಂತೋಷ್ ಹೆಗ್ಡೆ ಅವ್ರು.
ಸೀನ : ಅಲ್ಲಲೇ ಕೆಂಚ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಯಾವಾಗ್ಲಾ ಸಂತೋಷ ನೋಡಿದ್ದೇ ನೀನು!? ಆವಯ್ಯ ಯಾವಾಗಲೂ ಮುಖ ಗಂಟ್ ಹಾಕ್ಕಂಡೆ ಇರ್ತಾರೆ....... 
ಸಿದ್ದ : ನಿಜ ಕಣ್ಲಾ ಸೀನ......ಆವಯ್ಯ ನಗೋದೇ ಕಷ್ಟ ಕಣ್ಲಾ ಅದ್ಕೆ ಅವ್ರು ಸದಾನಂದ ಗೌಡ್ರುನ್ನ ಪಕ್ಕಕ್ಕೆ ಇಟ್ಕಂಡಿದ್ರು.....ಸದಾನಂದ ಗೌಡ್ರು ಯಾವಾಗ್ಲೂ ನಗ್ತಾ ಇರ್ತಾರೆ, ಆದ್ರೆ ಈಶ್ವರಪ್ಪ ಬಂದು ಸದಾನಂದ ಗೌಡ್ರುನ್ನ ಎಬ್ಬಿಸಿ ಅವ್ರ ಸೀಟ್ನಾಗೆ ಇವ್ರು ಕುಂತ್ಕಂಬುಟ್ರು. 
ಕೆಂಚ : ಅದೇನಾರಾ ಆಗ್ಲಿ ಬುಡ್ಲಾ.....ಆದ್ರೂ ನಮ್ ಯಡ್ಯೂರಪ್ನೋರು ಇಷ್ಟೆಲ್ಲಾ ಒಳ್ಳೆ ಕೆಲ್ಸ ಮಾಡುದ್ರು ......ಆದ್ರೆ ಈ ಟಿವಿನೋರು, ಪೇಪರ್ನೋರು ನಮ್ ಸಿಎಂ ಬಗ್ಗೆ ಬರೀ ಕೆಟ್ಟದ್ದೇ ಹಾಕ್ತಾರೆ..ಭಾಳಾ ಮೋಸ.
ಸಿದ್ದ : ಸಿಎಂ ಸಾಹೇಬ್ರು ನಿಂಗೂ ಏನಾರಾ ಕಾಸು-ಗೀಸು  ಕೊಟ್ರೆನ್ಲಾ ಕೆಂಚ ....ಈಪಾಟಿ ವಹಿಸ್ಕಂತ ಇದ್ದೀಯ ಆವಯ್ಯನ್ನ.
ಕೆಂಚ : ಅದ್ಕಲ್ಲಾ ಕಣ್ಲಾ ಸಿದ್ದ....ನನ್ ಹೆಂಡ್ರು ಹುಟ್ಟಿದ ಹಬ್ಬಕ್ಕೆ ಸೀರೆ ಕೊಡ್ಸು ಅಂತ ಪ್ರಾಣ ತೆಗೀತಾ ಇದ್ಲು , ಕಾಸಿಲ್ಲ ಕಣಮ್ಮಿ ಬಾರೋ ವರ್ಷ ಕೊಡುಸ್ತೀನಿ ಅಂದ್ರೆ ಜಗಳಕ್ಕೆ ಬತ್ತಿದ್ಲು. ಅದೇ ಟೈಮ್ಗೆ ನಮ್ ಸಿಎಂ ಸಾಹೇಬ್ರು ದೇವ್ರು ಬಂದಂಗೆ ಬಂದು "ಭಾಗ್ಯಲಕ್ಷ್ಮಿ" ಸ್ಕೀಮ್ನಾಗೆ ಸೀರೆ ಹಂಚುದ್ರು . ನನ್ ಮಗ್ಳು ಸೈಕಲ್ ಕೊಡ್ಸು ಇಲ್ಲಾಂದ್ರೆ ಸ್ಕೂಲಿಗೆ ಹೋಗಕಿಲ್ಲ ಅಂತಿದ್ಲು. ನಮ್ ಯಡ್ಯೂರಪ್ನೋರು ಸೈಕಲ್ ಕೊಟ್ಟು ಪುಣ್ಯ ಕಟ್ಕಂಡರು. ಕಷ್ಟಕಾಲ್ದಾಗೆ ನಮ್ ಸಿಎಂ ಸಾಹೇಬ್ರು ದ್ಯಾವ್ರು ಬಂದಂಗೆ ಬಂದು ಸಹಾಯ ಮಾಡವ್ರೆ...ಈಗ ಅವ್ರು ಕಷ್ಟದಾಗೆ ಅವ್ರೆ, ನಾವು ಸಪೋಲ್ಟ್ ಮಾಡ್ನಿಲ್ಲ ಅಂದ್ರೆ ಸಿವ ಮೆಚ್ತಾನಾ!!
ಸಿದ್ದ : ಅಲ್ಲಾ ಕಣಲೇ ಕೆಂಚ ಸೀರೆ, ಚಡ್ಡಿ ಕೊಟ್ರು ಅಂತ ಅವ್ರು ಮಾಡಿದ್ನೆಲ್ಲ ಸರೀ ಅನ್ನಕೆ ಆಯ್ತದಾ? ಅದ್ನ ನಿಮ್ ಸಿವ ಮೆಚ್ತಾನಾ!!??
ಕೆಂಚ : ಯಡ್ಯೂರಪ್ಪ ನಮ್ 'ಧಣಿ' ಕಣ್ಲಾ ಅವ್ರು ಗಣಿ ದುಡ್ದಾರಾ ತಿನ್ಲಿ ಏನಾರಾ ತಿನ್ಲಿ ನಮ್ ಸಪೋಲ್ಟು ಮಾತ್ರ ಅವರ್ಗೆ ಕಣ್ಲಾ 
ಸೀನ : ಇನ್ನೊಂದು ಇಶ್ಯ ಪೇಪರ್ನಾಗೆ ಬಂದೈತೆ ನೋಡ್ದ ಸಿದ್ದ. ನಮ್ ಸಿಎಂ ಯಡ್ಯೂರಪ್ನೋರ್ಗೆ ನೊಬೆಲ್ ಅವಾರ್ಡ್ ಕೊಡ್ಬೇಕಿತ್ತಂತೆ.

ಅಷ್ಟೊತ್ತಂಕ ಸುಮ್ನೆ ಕುಂತಿದ್ದ ನಾಣಿ ಎದ್ದು ನಿಂತ್ಕಂಡು ಒಂದೇ ಒಂದು ಪಂಚಿಂಗ್ ಡೈಲಾಗ್ ಹೊಡ್ದ " ಇಷ್ಟೆಲ್ಲಾ ಗೋಲ್ಮಾಲ್ ಮಾಡಿರೋ ನಮ್ ಸಿಎಂಗೆ ನೊಬೆಲ್ ಅವಾರ್ಡ್ ಅಲ್ಲ NO BAIL AWARD ಕೊಡ್ಬೇಕು " ಅಂದ.

ಯಾಕೋ ವಿಷ್ಯ ಗರಂ ಆಗ್ತಾ ಇದೆ ಅಂತ ಹೆದರಿದ ಟೀ ಅಂಗಡಿ ರಾಮಣ್ಣ ನಾಲ್ಕೂ ಜನರಿಗೆ ಫ್ರೀಯಾಗಿ ಗರಮಾಗರಂ ಟೀ ಕೊಟ್ಟು ಕಳಿಸಿದ. 

ಮಂಗಳವಾರ, ಜುಲೈ 26, 2011

ಇಂದಿಗೆ ಒಂದು ವರ್ಷದ ಹರ್ಷ

                          ನನ್ನೆಲ್ಲಾ ನಲ್ಮೆಯ ಗೆಳೆಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಂದು ೨೭ನೇ  ಜುಲೈ ೨೦೧೧. ಇಂದಿಗೆ ನನ್ನ "ಮನದ ಮಾತು" ಅಕ್ಷರ ರೂಪದಲ್ಲಿ ಮೂಡಲಾರಂಭಿಸಿ ಒಂದು ವರ್ಷ ಪೂರೈಸಿದೆ. ೨೭  ಜುಲೈ ೨೦೧೦ ರಂದು ನನ್ನ ಗೆಳೆಯನೊಬ್ಬನ ಇಂಗ್ಲಿಷ್ ಬ್ಲಾಗ್ ನೋಡಿ ನಾನೂ ಕನ್ನಡದಲ್ಲಿ ಒಂದು ಬ್ಲಾಗ್ ಬರೆಯೋಣ ಎಂದು ಪ್ರಾರಂಭಿಸಿದೆ. ನಾನು ಬ್ಲಾಗ್ ಬರೆಯಲು ಆರಂಭಿಸಿದ ದಿನದಿಂದ ಇಂದಿನವರೆಗೆ ಹಲವಾರು ಹಿರಿಯ ಬರಹಗಾರರು, ಗೆಳೆಯರು ನನ್ನನ್ನು ಬೆಂಬಲಿಸುತ್ತಾ, ನನ್ನ ತಪ್ಪಿದ್ದಾಗ ತಿದ್ದುತ್ತಾ, ಉತ್ತಮ ಬರಹಗಳನ್ನು ಪ್ರಶಂಶಿಸುತ್ತಾ, ಸ್ವಾರಸ್ಯಕರ ಚರ್ಚೆಗೆ ಹಚ್ಚುತ್ತಾ ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾಗಿದ್ದಾರೆ. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ.  


                        ಇತ್ತೀಚಿಗೆ ಹಲವಾರು ದಿನಗಳಿಂದ ನಾನು ಬರವಣಿಗೆಯಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಲಾಗಿಲ್ಲ. ಇನ್ನು ಮುಂದೆ ಸಾಧ್ಯವಾದಷ್ಟೂ ನಿರಂತರವಾಗಿ ಬರೆಯಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುವೆ. 

ವಂದನೆಗಳೊಂದಿಗೆ,


ವಿಜಯ್ ಹೆರಗು 



ಸೋಮವಾರ, ಜುಲೈ 11, 2011

ಮೂಡಿಬಂದ ಮೋಡಿಗಾರ

ಅದೋ ನೋಡು ಮೂಡಣದಲಿ
ಮೂಡಿಹನವ ಮೋಡಿಗಾರ
ಜಗಕೆಲ್ಲ ಬೆಳಕ ನೀಡಿ
ಜಗಮಗಿಸುವ ನೇಸರ

ದಣಿವೆಯೆಂಬುದನ್ನು ಅರಿಯ

ತನ್ನ ಕಾಯಕವನ್ನು ಮರೆಯ
ಒಮ್ಮೆ ಅತ್ತ ಒಮ್ಮೆ ಇತ್ತ
ಭುವಿಯ ಸುತ್ತಿ ಬೆಳಕನಿತ್ತ

ಸೂರ್ಯೋದಯ - ಸೂರ್ಯಾಸ್ತ

ನೋಡಲೆನಿತು ಸುಂದರ
ಇವನಿಗೊಬ್ಬ ಜೊತೆಗಾರ
ಅವನೇ ಚೆಲುವ ಚಂದಿರ 


ಇವನಂದಕೆ ಇವನೇ ಉಪಮೆ
ಸಾಟಿ ಬೇರೆಯಿಲ್ಲ ಇವನಿಗೆ
ಅಂಧಕಾರವನ್ನು ಅಳಿಸಿ
ಕೊಂಡೊಯ್ಯುವ ಬೆಳಕಿನೆಡೆಗೆ

 


 









ಬುಧವಾರ, ಜೂನ್ 15, 2011

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

ಪ್ರಿಯ ಗೆಳೆಯರೇ, 

                     "ರಾಬಿನ್ ಚುಗ್", ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
                   
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  "ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು" ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು. 
                      
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 'ಬೆಂಗಳೂರ್ ಮಿರರ್' ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ "F**K OFF" ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ.http://www.bangaloremirror.com
/index.aspx?page=article&sectid=10&contentid=201106072011060

               ಹೀಗೆ ಕೀಳುದರ್ಜೆಯ ಪ್ರತಿಕ್ರಿಯೆಯೊಂದನ್ನು ನೀಡಿದ ರಾಬಿನ್ ತನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದಲೇ ಉಗಿಸಿಕೊಂಡಿದ್ದಾನಾದರೂ ಆ ಪ್ರತಿಕ್ರಿಯೆಯನ್ನು ಅಥವಾ ಪೋಸ್ಟ್ ಅನ್ನು ತೆಗೆದುಹಾಕಿರಲಿಲ್ಲ. ನಂತರದಲ್ಲಿ ಬಂದ ವ್ಯಾಪಕ ಟೀಕೆ ಹಾಗೂ ಬೆದರಿಕೆಗಳಿಗೆ ತಲೆಬಾಗಿ ಕೊನೆಗೆ ಆ ಪೋಸ್ಟನ್ನು ತೆಗೆದ ಹಾಗೂ ಕ್ಷಮೆಯಾಚಿಸಿದ. ಇಷ್ಟರ ವೇಳೆಗೆ ಆತನ ಕಚೇರಿಯ ವಿಳಾಸ, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ ಎಲ್ಲೆಡೆ ಹರಡಿತ್ತು. ನನಗೂ ಸಹ ಗೆಳೆಯ ಸಾಗರ್ ರಾಜ್ ಮುಖಾಂತರ ಆತನ ಮೊಬೈಲ್ ನಂಬರ್ ಸಿಕ್ಕಿತು. ಇಷ್ಟರಲ್ಲಾಗಲೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿರಬಹುದು ಎಂದುಕೊಂಡೇ ಕರೆ ಮಾಡಿದೆ. ಎರಡು ರಿಂಗ್ ಆದಮೇಲೆ ಫೋನ್ ತೆಗೆದ. ನಾನು ಅವನಿಗೆ ಮೊದಲು ಕೇಳಿದ ಪ್ರಶ್ನೆ "ನಿನಗೆ ಕನ್ನಡ ಬರುತ್ತಾ? ಅದಕ್ಕವನು ಸ್ವಲ್ಪ ಸ್ವಲ್ಪ ಗೊತ್ತು ಅಂತ ಹೇಳಿದ. ಕನ್ನಡ ನಾಡಿಗೆ ಬಂದು, ಕನ್ನಡದ ಜನರ ಮಧ್ಯೆ ಇದ್ದು, ಕನ್ನಡಿಗರ ಅನ್ನ ತಿಂದು ಇಲ್ಲಿನ ನೀರು ಕುಡಿದು ಜೀವನ ಸಾಗಿಸುತ್ತಿರುವ ನೀನು ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಹೀಗೆ ಹೀನ ಪದ ಪ್ರಯೋಗ ಮಾಡಿದ್ದು ಎಷ್ಟು ಸರಿ ಎಂದು ದಬಾಯಿಸಿದೆ. ಅದಕ್ಕವನು " ಇಲ್ಲ ಸರ್, ನನ್ನ ಉದ್ದೇಶ ಆ ಶಿಫಾರಸ್ಸನ್ನು ವಿರೋಧಿಸುವುದಷ್ಟೇ ಆಗಿತ್ತು, ಆದರೆ ನಾನು ಬಳಸಿದ ಶಬ್ದದ ಬಗ್ಗೆ ನನಗೆ ಪಶ್ಚಾತ್ತಾಪ ಇದೆ" ಎಂದ. 

                  ಕನ್ನಡಿಗರು ಉದಾರ ಹೃದಯಿಗಳು. ಇದು ನಮ್ಮ ವಿಶೇಷತೆಯೂ ಹೌದು ಜೊತೆಗೇ ವೀಕ್ನೆಸ್ ಕೂಡಾ. ನಾವು ಕನ್ನಡಿಗರು ಅಂಗಡಿಗೆ ಬಂದ ವಲಸಿಗ ಗಿರಾಕಿಯನ್ನು ಅವರದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷಿನಲ್ಲಿ ಮಾತಾಡಿಸುತ್ತೇವೆ. ವಿಳಾಸ ಹುಡುಕುತ್ತಾ ಬಂದ ಹೊರಗಿನವರಿಗೆ ಅವರದೇ ಭಾಷೆಯಲ್ಲಿ ಅಡ್ರೆಸ್ ಹೇಳುತ್ತೇವೆ. ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತೇವೆ. ಅವರ ಅನುಕೂಲಕ್ಕಾಗಿ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತೇವೆ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸುವ ನಿನ್ನಂತಹ ಮಂದಿ ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ದಬಾಯಿಸಿದೆ. ಮತ್ತೊಮ್ಮೆ ತನ್ನ ತಪ್ಪಿಗಾಗಿ ಕ್ಷಮೆ ಕೇಳಿದ ಆತ ಇನ್ನೆಂದೂ ತಾನು ಈ ರೀತಿ ವರ್ತಿಸುವುದಿಲ್ಲ ಎಂದು ಅಲವತ್ತುಕೊಂಡ. ನಿನಗೆ ಆಸಕ್ತಿಯಿದ್ದಲ್ಲಿ ನಾನು ನಿನಗೆ ಕನ್ನಡ ಕಳಿಸಿಕೊಡುತ್ತೇನೆ ಎಂದು ಆತನಿಗೆ ಹೇಳಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆತ ಕನ್ನಡ ಕಲಿಯಬೇಕೆಂಬ ಆಸೆ ತನಗೂ ಇದೆ ಎಂದು ಹೇಳಿದ. ಮತ್ತೇಕೆ ನೀನು ಆ ಶಿಫಾರಸ್ಸನ್ನು ವಿರೋಧಿಸಿದೆ ಎಂದು ಕೇಳಿದೆ.   
ಅದಕ್ಕೆ ಆತನ ಪ್ರತಿಕ್ರಿಯೆ ಹೀಗಿತ್ತು " ನಾನು ಕಳೆದ ೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನ್ನ ಅವಶ್ಯಕತೆಗೆ ತಕ್ಕಷ್ಟು ಮಟ್ಟಿಗಿನ ಕನ್ನಡ ಕಲಿತಿದ್ದೇನೆ.ಇದನ್ನು ನಾನು ನನ್ನ ಅವಶ್ಯಕತೆಗಾಗಿ ಕಲಿತಿದ್ದೇನೆ ಹೊರತು ಯಾರದೇ ಒತ್ತಾಯಕ್ಕಲ್ಲ. ಯಾರಾದರೂ ನನ್ನ ಬೆನ್ನ ಹಿಂದೆ ನಿಂತು ಲಾಠಿ ಹಿಡಿದು ಕನ್ನಡ ಕಲಿ ಎಂದಿದ್ದರೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕೆಂಬುದನ್ನು, ಏಳನೇ ತರಗತಿಯ ತತ್ಸಮಾನ ಕನ್ನಡ ಪರೀಕ್ಷೆ ಪಾಸು ಮಾಡಬೇಕು ಎಂಬುದನ್ನು ನಾನು ವಿರೋಧಿಸಿದೆ." 

                ರಾಬಿನ್ ಹೇಳಿದ ಈ ಮಾತುಗಳನ್ನು ಕೇಳಿದ ನಂತರ ಈತನ ಮಾತುಗಳಲ್ಲೂ ಸತ್ಯವಿದೆ ಎನ್ನಿಸಿತು. ಕರ್ನಾಟಕಕ್ಕೆ ಉದ್ಯೋಗ ಅರಸಿ, ಬದುಕು ಕಟ್ಟಿಕೊಳ್ಳಲು ಬಂದಿರುವ ಜನರಲ್ಲಿ ಕೇವಲ ವಿದ್ಯಾವಂತರು, ಅಕ್ಷರಸ್ಥರೆ ಇಲ್ಲ. ಅನಕ್ಷರಸ್ಥರು, ಅವಿದ್ಯಾವಂತರೂ ಇದ್ದಾರೆ. ಅವರುಗಳು ಏನು ಮಾಡಬೇಕು? ಹೊರರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರಿಗೂ ಆಯಾ ರಾಜ್ಯಗಳ ಸರ್ಕಾರ ಇಂತಹುದೇ ಕಾನೂನು ಜಾರಿಗೆ ತಂದರೆ ನಾವು ಒಪ್ಪುವುದು ಸಾಧ್ಯವೇ? ಎಂದು ನನ್ನ ಮನಸ್ಸು ಕೇಳುತ್ತಿತ್ತು. ಆದರೆ ರಾಬಿನ್ ಪ್ರತಿಕ್ರಿಯಿಸಲು ಉಪಯೋಗಿಸಿದ ಭಾಷೆಗೆ ನನ್ನ ವಿರೋಧ ಇದ್ದೇ ಇದೆ. ಆದಕ್ಕೆ ನಾನು ಅವನಿಗೊಂದು ಸಲಹೆ ನೀಡಿದೆ. ನಿನಗೆ ಬರುವ ಎಲ್ಲಾ ಮೊಬೈಲ್ ಕರೆಗಳನ್ನೂ ಸ್ವೀಕರಿಸಬೇಕು, ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು, ಎಲ್ಲಾ ಕರೆಗಳು, ಮಿಂಚಂಚೆಗಳಿಗೂ ಉತ್ತರಿಸಬೇಕು, ಎಲ್ಲರಲ್ಲಿ ಕ್ಷಮಾಪಣೆ ಕೇಳಬೇಕು.....ಇದೇ ನಿನ್ನ ತಪ್ಪಿಗೆ ಶಿಕ್ಷೆ ಎಂದು ಭಾವಿಸು ಎಂದೆ. ನನ್ನ ಮಾತನ್ನು ಒಪ್ಪಿದ ಅವನು ಈಗಾಗಲೇ ಅದೇ ರೀತಿಯಲ್ಲಿ ವರ್ತಿಸುತ್ತಿದ್ದು ಲಿಖಿತರೂಪದಲ್ಲಿ ಕೂಡಾ ಕ್ಷಮೆ ಯಾಚಿಸಿದ್ದಾನೆ. "ಪಶ್ಚಾತಾಪಕ್ಕಿಂಥ ದೊಡ್ಡ ಶಿಕ್ಷೆ ಮತ್ತೊಂದಿಲ್ಲ" ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿ ನನ್ನೆಲ್ಲಾ ಸಹೃದಯೀ ಮಿತ್ರರಲ್ಲಿ ನನ್ನ ಮನವಿ ಏನೆಂದರೆ ಈ ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸೋಣ. 
                     
                ಕನ್ನಡ ನಾಡನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಅವಹೇಳನಕಾರಿ ಮಾತನ್ನಾಡಿದ ಅದೇ ವ್ಯಕ್ತಿಗೆ ಕನ್ನಡ ಕಲಿಸಿ ಕನ್ನಡ ನಾಡಿನ ಬಗ್ಗೆ ಹೆಮ್ಮೆಯ ಮಾತಾಡುವಂತೆ ಮಾಡುವ ಬಯಕೆ ಇದೆ. ನಿಮ್ಮ ಸಹಕಾರ, ಬೆಂಬಲ ಇರಲಿ. 



                 ವಿವಾದಕ್ಕೆ ಕಾರಣವಾದ ಪೋಸ್ಟ್ 
                                                                                                                               ಕ್ಷಮಾಪಣಾ ಪತ್ರ 
    

ಗುರುವಾರ, ಜೂನ್ 9, 2011

ಎತ್ತ ಸಾಗಿದೆ ಪ್ರಜಾಪ್ರಭುತ್ವ !!!???

                      ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.
                                         ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
                               ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ.

                   ದೇಶದ ಇಂಥ ಸ್ಥಿತಿಗೆ ಕಾರಣವೇನು ಎಂದು ಯೋಚಿಸಿದರೆ ಅದು ಸುತ್ತಿ ಬಳಸಿ ನಮ್ಮತ್ತಲೇ ಬೊಟ್ಟು ಮಾಡಿ ತೋರಿಸುತ್ತದೆ.  ಹಿರಿಯ ನ್ಯಾಯವಾದಿಗಳಾದ  ಎ.ಜಿ. ನೂರಾನಿ ಅವರು " Its an illusion that India is a multi-party democracy. There is really only one party" ಎಂದು ಒಂದೆರಡು ವರ್ಷದ ಹಿಂದೆ ತಮ್ಮ ಲೇಖನವೊಂದರಲ್ಲಿ ಹೇಳಿದ್ದರು  ಇಂದಿನ ಪರಿಸ್ಥಿತಿಗೆ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.                              ಹೌದು, ನಾವು ಭ್ರಮೆಯಲ್ಲಿದ್ದೇವೆ. ಇಲ್ಲಿ ಇರುವುದು ಒಂದೇ ಪಕ್ಷ. ಇಲ್ಲಿ ಆಡಳಿತ ಪಕ್ಷ ಏನು ಮಾಡುತ್ತದೋ, ಏನು ಹೇಳುತ್ತದೋ ಅದೇ ಸರಿ. ವಿರೋಧಪಕ್ಷ ಹೆಸರಿಗೆ ಮಾತ್ರ ಇದೆ. ಅದಕ್ಕೆ ಕವಡೆ ಕಿಮ್ಮತ್ತಿಲ್ಲ. 
                      ಉದಾಹರಣೆಗೆ, ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಪ್ಪುಹಣದ ವಿಷಯವನ್ನೇ ತೆಗೆದುಕೊಂಡರೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಭಾಜಪ " ಕಪ್ಪುಹಣವನ್ನು ಕೂಡಲೇ ವಾಪಸ್ ತನ್ನಿ " ಎಂದರೆ " ನೀವು ಆಡಳಿತದಲ್ಲಿದ್ದಾಗ ಏಕೆ ಕಪ್ಪುಹಣವನ್ನು ವಾಪಸ್ ತರಲಿಲ್ಲ, ಈಗೇಕೆ ಬೊಬ್ಬೆ ಹಾಕುತ್ತೀರಿ" ಎಂದು ಕೇಂದ್ರ ಸರ್ಕಾರವು 'ಭಾಜಪ'ದ  ಬಾಯಿ ಮುಚ್ಚಿಸುತ್ತದೆ. ಇನ್ನು ರಾಜ್ಯಸರ್ಕಾರದ ವಿಷಯಕ್ಕೆ ಬಂದರೆ ಭೂಹಗರಣ, ಗಣಿಹಗರಣ ಇನ್ನಿತರ ಯಾವುದೇ ವಿಷಯ ಚರ್ಚೆಗೆ ಬಂದರೂ ವಿರೋಧ ಪಕ್ಷಗಳ ಮೇಲೆ ಹರಿಹಾಯುವ ನಮ್ಮ ಮುಖ್ಯಮಂತ್ರಿಗಳು "ನಿಮ್ಮ ಆಡಳಿತದ ಅವಧಿಯಲ್ಲಿ ನೀವು ಮಾಡಿದ್ದೇನು? ನೀವು ಲೂಟಿ ಮಾಡಿಲ್ಲವೇ, ನಾವು ಮಾಡಿದರೆ ತಪ್ಪೇನು? "ಎಂಬ ಧೋರಣೆಯ ಹೇಳಿಕೆ ನೀಡುತ್ತಾರೆ.
                               ಇವೆಲ್ಲವನ್ನೂ ನೋಡಿದಾಗ ಒಮ್ಮೊಮ್ಮೆ ಮನಸ್ಸಿಗೆ ಆಘಾತವಾಗುತ್ತದೆ. ನಾವು ಮತದಾರರು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಏಳುತ್ತದೆ.
ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ಪಕ್ಷಗಳ ಪ್ರಣಾಳಿಕೆಗಳು ವಿಭಿನ್ನವಾಗಿರುತ್ತವೆ ಹೊರತು ಆಡಳಿತದಲ್ಲಿ ಅಂತಹದ್ದೇನೂ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಸರ್ಕಾರಗಳು ಕೈಗೊಂಡ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಹೊಸ ಹೆಸರು ನೀಡಿ     " ಹೊಸ ಬಾಟಲಿಯಲ್ಲಿ ಹಳೆಯ ಮದ್ಯ" ಎಂಬಂತೆ ಆಡಳಿತ ನಡೆಸುತ್ತಾರೆ.   
ಕೆಟ್ಟದ್ದಕ್ಕೆಲ್ಲಾ ಹಿಂದಿನ ಸರ್ಕಾರವನ್ನು ದೂಷಿಸುತ್ತಾ,ಒಳ್ಳೆಯದ್ದಕ್ಕೆಲ್ಲಾ ತಮ್ಮಿಂದಲೇ ಆದದ್ದು ಎಂದು ಬೀಗುತ್ತಾ, ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಾ ಇದನ್ನೇ 'ಆಡಳಿತ' ಎಂದು ತಿಳಿದಿರುವುದು ಇಂದಿನ ರಾಜಕಾರಣಿಗಳ ಬೌದ್ದಿಕ ದಾರಿದ್ರ್ಯದ ಪರಮಾವಧಿ ಎನ್ನದೆ ವಿಧಿಯಿಲ್ಲ. 

                     ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿಯೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿ ಸಾರ್ವಜನಿಕ ಚರ್ಚೆಗಳಾಗಬೇಕಿದೆ. ಈ ಪದ್ಧತಿ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿದ್ದು ಇಲ್ಲಿಯೂ ಇಂತಹ ಚರ್ಚೆ ನಡೆದರೆ ಮತದಾರನನ್ನು ಜಾಗೃತನಾಗಿಸಲು ನೆರವಾಗುತ್ತದೆ.



           

                    

ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

ಅಷ್ಟಗಲ ಆಗಸದಿ
ಎಷ್ಟೊಂದು ಹಕ್ಕಿಗಳು
ಆಸೆಯಾಗುತಿದೆ 'ಹೇಗಾದರೂ ಮಾಡಿ
ಹೆಕ್ಕಬೇಕಿದೆ ಹಾದಿ'
ಹಾರಿ ಸೇರಲೇಬೇಕು ಮುಗಿಲ ಹಾದಿ   




ಬಾನ ಎತ್ತರಕೇರಿ
ಮೋಡದೊಳಗಡೆ ತೂರಿ
ಹಾರುವಾಸೆಯು ಎನಗೆ ಕಲಿಸಿ ಹೇಗೆ?
ಗೂಡನೊಂದನು ಕಟ್ಟಿ, ಕೊಕ್ಕಲ್ಲಿ ಹಿಡಿದು ರೊಟ್ಟಿ
ಕಂದಗೆ ತಂದುಣಿಸುವ ಕಲೆಯ ತಿಳಿಸಿ ಎನಗೆ






ನಿಮ್ಮಂತೆಯೇ ನಾನು
ಪಡೆಯಬೇಕಿದೆ ರೆಕ್ಕೆ
ಹಾರಬೇಕಿದೆ ದೂರ ದೂರ......
ಸಪ್ತಸಾಗರ ದಾಟಿ, ಎಲ್ಲ ಎಲ್ಲೆಯ ಮೀಟಿ
ಕಾಣಬೇಕಿದೆ ಹೊಸತು ಬದುಕ ಸಾ

ಸೋಮವಾರ, ಮೇ 16, 2011

ಬಲಾಬಲ

ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.




ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.



ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
                            ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.



ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.



ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ.....ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,

ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ....ನೋಡಿ ಆನಂದಿಸೋಣ



ಕೊನೆಗೂ ಹತ್ತು ಮಂದಿ

ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ

ಪ್ರಶ್ನೆಯೊಂದು ಹಾಗೇ ಉಳಿದಿದೆ

ನಮ್ಮ ಜನರಿಗೆ ಬುದ್ಧಿ ಬಂದೀತೇ !!??

ಶನಿವಾರ, ಮೇ 14, 2011

ಅ"ರಾಜಕೀಯ"

                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿ ಮತ್ತೊಮ್ಮೆ ಅಲುಗಾಡಿದಂತೆ ಕಾಣುತ್ತಿದೆ. ಆದರೆ ಯಡಿಯೂರಪ್ಪ ಬಗ್ಗುವ ಆಸಾಮಿಯಲ್ಲ  . ಈಗಾಗಲೇ  ಅವರು ತಮ್ಮ ಸೀಟು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
           
                                            ಬಿಜೆಪಿಯ ೧೧ ಶಾಸಕರು ಹಾಗೂ ೫ ಮಂದಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಆಶಯ ಮೂಡಿಸಿದೆ. ಜೊತೆಜೊತೆಗೇ ಮುಂದೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                                          ಯಡಿಯೂರಪ್ಪನವರು ತಮ್ಮ ಪಕ್ಷದ ೧೧ ಶಾಸಕರಿಗೆ ಗಾಳ ಹಾಕಲು ತಯಾರಿ ನಡೆಸಿದ್ದು ಹಣದ, ಅಧಿಕಾರದ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದು"ಕೊಳ್ಳು"ವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಇದೇನೂ ಕಷ್ಟದ ಮಾತಲ್ಲ. ಈಗಿರುವ ಸ್ಥಿತಿಗಿಂತಲೂ ಸಂಕಷ್ಟದ ಸಮಯಗಳಲ್ಲಿ ಬಚಾವಾಗಿ ಬಂದ ಅನುಭವ ಅವರಿಗಿದೆ. ಮುಖ್ಯಮಂತ್ರಿಗಳು ತಮಗಿರುವ ಹಣಬಲ, ಜನಬಲವನ್ನು
 ಉಪಚುನಾವಣೆಗಳಲ್ಲಿ, ಕಮಲದ ಆಪರೇಷನ್ನುಗಳಲ್ಲಿ ತೋರ್ಪಡಿಸಿದ್ದಾರೆ.


ಕಾವಿಯ, ಕಾಸಿನ ಬಲವಿದ್ದರೆ ಸಾಕು



ಹೈಕಮಾಂಡನ್ನೇ ಗೆಲ್ಲುವೆನು


ನೋಟಿನ ಮೂಟೆಯ ಚೆಲ್ಲಿಯಾದರೂ


ಖುರ್ಚಿಗೆ ಅಂಟಿ ಕೂರುವೆನು
 
ಎಂದು ಹೇಳುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಯಡ್ಡಿಯ ವರಸೆಗೆ ಬ್ರೇಕ್ ಹಾಕಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡು ಕೇಂದ್ರದ ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರಿದೆ. ಇದನ್ನೇನು ಹುಂಬತನ ಎನ್ನಬೇಕೋ, ವ್ಯವಸ್ಥೆಯ ದೋಷ ಎನ್ನಬೇಕೋ ತಿಳಿಯುತ್ತಿಲ್ಲ . 
 
ಇನ್ನು ಮತ್ತೊಮ್ಮೆ ಕುಮಾರಸ್ವಾಮಿಯವರಿಗೆ ಕೈತುಂಬಾ ಕೆಲಸ. ತಮ್ಮೊಡನೆ ಬರಲು ಬಯಸುವ ಶಾಸಕರನ್ನು ಗೋವಾ ಕಡಲತಡಿಯಲ್ಲಿ ನೆನೆಹಾಕಬೇಕು. ಅವರು ಕೇಳಿದಷ್ಟು ಸವಲತ್ತುಗಳನ್ನು ಪೀಕಬೇಕು. ರೆಸಾರ್ಟು ಮಾಲೀಕರುಗಳನ್ನು ಉದ್ಧಾರ ಮಾಡಬೇಕು. 
ಮೀಡಿಯಾ ಜನರಿಗಂತು ಮತ್ತೊಂದು ಹಬ್ಬ ಬಂತು. ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸುಗಳು, ಚರ್ಚೆಗಳು ಮಾಡುತ್ತಾ ಟಿ ಆರ್ ಪಿ ಕಸರತ್ತಿನ ಪ್ರದರ್ಶನ. 
 



ಇವೆಲ್ಲದರ ನಡುವೆ ಹೈರಾಣಾಗುವ ಶ್ರೀಸಾಮಾನ್ಯ ತನ್ನ ನಸೀಬನ್ನು ದೂಷಿಸುತ್ತಾ ತಲೆ ಮೇಲೆ ಕೈ (ಕಾಂಗ್ರೆಸ್ಸ್ ಕೈ ಅಲ್ಲ)ಹೊತ್ತು ಕೂತು ಭ್ರಷ್ಟ ರಾಜಕಾರಣಿಗಳ ಸೋಗಲಾಡಿತನವನ್ನು ಶಪಿಸುತ್ತಾ ಕಾಯುತ್ತಾನೆ......ಬರಲಿರುವ ಚುನಾವಣೆಗಾಗಿ.....ಓಟಿಗಾಗಿ....ಗರಿಗರಿ ನೋಟಿಗಾಗಿ.......     

ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

ಮೊಲೆ ಉಣಿಸಿ

ಪ್ರೀತಿ ಮಳೆಗರೆದ

ಜೀವಕ್ಕೆ ಋಣಿ

____________________________

ಅಮ್ಮ ಎನ್ನುವ

ಎರಡಕ್ಷರದಲ್ಲಿ

ಅದೆಂಥಾ ಶಕ್ತಿ !!!


_______________________

ನಿನ್ನ ಮೊಗದ

ನಿಷ್ಕಲ್ಮಶ ನಗೆಯು

ಮಾಸದಿರಲಿ







_________________________

ತಾಯಿ ಕರುಣೆ,

ಪ್ರೀತಿ ಮುಂದೆ ದೇವರೂ

ಶರಣಾದನು

______________________________


ನಿಷ್ಕಲ್ಮಷತೆ,

ಮುಗ್ಧತೆ ನನ್ನಮ್ಮನ

ಒಡವೆಗಳು


___________________________