ಬುಧವಾರ, ಫೆಬ್ರವರಿ 8, 2012

ಅವಿವೇಕ - ಅತಿರೇಕ

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ 
ವಿ.ಭಟ್ : ಹೇಳಿ ವಿಜಯ್ 
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ.ನಂದೊಂದು request ನೀವು ತೋರಿಸ್ತಾ ಇರೋ     ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ. 
ವಿ.ಭಟ್ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ ...... blur ಮಾಡ್ಬೇಡಿ ಹಾಗೇ ತೋರಿಸಿ ಅಂತ. 
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ವಿ.ಭಟ್ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ. 
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ........ ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ - ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ..... ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ
ವಿ.ಭಟ್ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ 
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ .......

                                  ಇಷ್ಟು ಹೇಳಿ ನಾನು ಫೋನ್ disconnect ಮಾಡಿದೆ. ಇದಿಷ್ಟೂ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಯ ಸಮಯದಲ್ಲಿ. ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲರ ಕೀಳು ಅಭಿರುಚಿ ಇಷ್ಟಕ್ಕೆಲ್ಲ ಕಾರಣ. ವಿಧಾನಸಭೆಯ ಕಲಾಪದ ಸಮಯದಲ್ಲಿ ಕಾಮಕೇಳಿಯ ವೀಡಿಯೊ ನೋಡುತ್ತಿದ್ದ ಈ ಪುಡಾರಿಗಳ ನಿಜ ಬಣ್ಣ ಬಯಲು ಮಾಡಿದ ಮಾಧ್ಯಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. 
  
                                24  X 7 ನ್ಯೂಸ್ ಚಾನಲ್ಲುಗಳ ಸಂಖ್ಯೆ ಹೆಚ್ಚಿದಂತೆ TRP (Target rating point ) ಸಮರ ಹೆಚ್ಚುತ್ತಿದೆ. ದಿನವಿಡೀ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಅನಿವಾರ್ಯತೆ ಎದುರಿಸುತ್ತಿರುವ ನ್ಯೂಸ್ ಚಾನಲ್ಲುಗಳು ಇಂತಹ ಗಿಮಿಕ್ಕುಗಳಿಗೆ ಇಳಿಯುತ್ತವೆ. "ನೇರ, ದಿಟ್ಟ , ನಿರಂತರ" ಸುದ್ದಿ ಬಿತ್ತರಿಸುವ ಭರದಲ್ಲಿ ಮಾಧ್ಯಮಗಳಿಗೆ ಇರಬೇಕಾದ ಸಾಮಾಜಿಕ ಕಾಳಜಿ, ಪತ್ರಿಕಾ ಧರ್ಮ, ನೀತಿ ನಿಯಮಗಳನ್ನು ಮರೆಯುತ್ತವೆ. 

                                ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನಿಜಕ್ಕೂ ಅಸಹ್ಯಕರ. ಆದರೆ ಇಂತಹ ಅಸಹ್ಯಗಳು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಹಲವು ಬಾರಿ ನಡೆದಿವೆ. ಹಣದ ಆಸೆಗೆ ಬಿದ್ದು ತಮ್ಮನ್ನೇ ಮಾರಿಕೊಂಡ ಸಂಸದರು, ಲೋಕಸಭೆಯಲ್ಲಿ ಲೋಕಪಾಲ್ ಮಸೂದೆಯ ಪ್ರತಿಯನ್ನು ಹರಿದೆಸೆದ ಸಂಸದರು, ವಿಧಾನಸಭೆಯಲ್ಲಿ ಕುರ್ಚಿಗಳನ್ನು,ಚಪ್ಪಲಿಗಳನ್ನೂ ಎಸೆದಾಡಿದ ಶಾಸಕರು ....ಒಂದೆರಡಲ್ಲ ಹತ್ತಾರು ಉದಾಹರಣೆಗಳನ್ನು ನಮ್ಮ ದೇಶದ ರಾಜಕಾರಣಿಗಳು ನಮಗಾಗಿ ಇತಿಹಾಸದಲ್ಲಿ ಉಳಿಸಿದ್ದಾರೆ. 

                                ಬೇರೆಯವರು ಮಾಡಿದ ತಪ್ಪನ್ನು ತೋರಿಸುವ ಭರದಲ್ಲಿ ನಾವೂ ತಪ್ಪು ಹಾದಿ ತುಳಿಯದಂತೆ ಎಚ್ಚರವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಯಾರೋ ಮಾಡಿದ ಅವಿವೇಕಕ್ಕೆ ಅತಿರೇಕದ ಸುದ್ದಿ ಬಿತ್ತರಿಸುವುದು ಸರಿಯಲ್ಲ.  ಇನ್ನಾದರೂ ನಮ್ಮ 24 X  7 ಸುದ್ದಿವಾಹಿನಿಗಳು ಎಚ್ಚೆತ್ತುಕೊಂಡು ಕೇವಲ ಮಾರುಕಟ್ಟೆ ದೃಷ್ಟಿಯಿಂದ ಹೊರಬಂದು ಮಾಧ್ಯಮಗಳ ಘನತೆಯನ್ನು ಎತ್ತಿಹಿಡಿಯಬೇಕಿದೆ.

8 ಕಾಮೆಂಟ್‌ಗಳು:

  1. ಇದು ನಿಜಕ್ಕೂ ಖೇಧಕರ ವಿಚಾರ.. ಅವರ ಪಾಪಗಳನ್ನು ಹಾಡಿ ಹೊಗಳುವ ಭರದಲ್ಲಿ ನಮ್ಮ ಸಮೂಹ ಮಾಧ್ಯಮಗಳು ನೈತಿಕತೆಯನ್ನು ಹರಾಜಿಗಿಟ್ಟಿವೆಯೇ ತಿಳಿಯುತ್ತಿಲ್ಲ.. ನೀವು ಹೇಳಿದ್ದು ನಿಜ ಮನೆಯಲ್ಲಿ ಎಲ್ಲರೊಂದಿಗೂ ಕುಳಿತು ನೋಡುವಾಗ ಭಾರೀ ಮುಜುಗರವಾಗುತ್ತಿದೆ.. ಇಂತಹ ಕೀಳು ಅಭಿರುಚಿ ಜನಪ್ರತಿನಿಧಿಗಳ ತಪ್ಪನ್ನು ಎತ್ತಿ ತೋರಿಸುವ ಜನಪ್ರತಿನಿಧಿಗಳಿಗೆ ಸಲ್ಲದು..

    ಪ್ರತ್ಯುತ್ತರಅಳಿಸಿ
  2. DEW DROP, ಇಂದು ನೈತಿಕತೆ, ಸಾಮಾಜಿಕ ಕಳಕಳಿ ಇವೆಲ್ಲ ಸವಕಲು ಪದಗಳಾಗಿವೆ. ಮಾಧ್ಯಮಗಳ ಪ್ರಥಮ ಪ್ರಾಶಸ್ತ್ಯ ಟಿ ಆರ್ ಪಿ

    ಪ್ರತ್ಯುತ್ತರಅಳಿಸಿ
  3. ನಿಮ್ಮ ಮಾತು ನಿಜ ವಿಜಯ್ ಸರ್, ನೆನ್ನೆ ಟಿವಿ ನೋಡುವಾಗ ನನ್ನ ಆರು ವರ್ಷದ ಮಗನಿಂದ ಹಲವಾರು ಪ್ರಶ್ನೆ ಗಳನ್ನ ನಾನು ಎದುರಿಸಬೇಕಾಯ್ತು ವಿಧಿಯಿಲ್ಲದೇ ... ನನ್ನ ಮಗನನ್ನು ಗದರಿ ಟಿವಿ ಆಫ್ ಮಾಡಿದೆ ... ತಪ್ಪು ಮಾಡಿದ "ಘನ ಸಚಿವರು" ಗಳಿಗೆ ಖಂಡಿತ ಶಿಕ್ಷೆಯಾಗಬೇಕು, ಆದರೆ ನಿಜಕ್ಕೂ ಟಿವಿ ಮಾದ್ಯಮಗಳು ಈ ವಿಷಯವನ್ನೂ ವೈಭವೀಕರಿಸುತ್ತಿರುವ ರೀತಿ ನಿಜಕ್ಕೂ ಕಳವಳಕಾರಿಯಾಗಿದೆ,

    ಪ್ರತ್ಯುತ್ತರಅಳಿಸಿ
  4. Hello,

    All the news channels are business houses today. They are selling a hot product called as news. They will sell things that are popular among people, products which people want to see.

    Yesterday's is the kind of news that we want to see. If it was not for the 'disturbance' from our family members we would have wanted to see it continuously without wanting any kind of blurring and also with 'full screen'.

    The point that i am trying to make is, there is no point in blaming electronic media. We have all ourself to blame. Today news has become an entertainment for us. We dont want to see serious news that are still telecasted doordarshan and in loksabha tv. As you said all they want is trp ratings. How will they get it? Answer is by people like us. If we decide that we will stop watching these kind of channels and rely on print media and doordarshan for our daily dose of news then not only does our general knowledge improves but also these news channels will be more responsible.

    And for our entertainment, we will ask Mr Krishna Palemar to forward that mms to us also.

    ಪ್ರತ್ಯುತ್ತರಅಳಿಸಿ
  5. ವಿಜಯ್ ಅವರೇ ನಿಮ್ಮ ಕಳಕಳಿ ಅರ್ಥ ಆಗುತ್ತದೆ.. ಈಗಿನ ಮಾಧ್ಯಮಗಳು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುತ್ತಿವೆ.. ಆದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಆ ವ್ಯಕ್ತಿ ಆ ರೀತಿ ಪ್ರತ್ಯುತ್ತರ ಕೊಟ್ಟಿದ್ದು ನಿಜಕ್ಕೂ ವಿಷಾದದ ಸಂಗತಿ..

    ಪ್ರತ್ಯುತ್ತರಅಳಿಸಿ
  6. Dear Narasimhan,

    You are absolutely correct, as you said we all have to reject this type of channels and go back to print media. We are also responsible for these happenings.

    ಪ್ರತ್ಯುತ್ತರಅಳಿಸಿ
  7. ಪ್ರತಿ ಟಿ. ವಿ ವಾಹಿನಿಯವರು ತಮಗೆಷ್ಟು ಲಾಭ ಅನ್ನುವುದನ್ನು ಲೆಕ್ಕ ಹಾಕುತ್ತಾರೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ, ಕೊಳ್ಳುವುದು ಇಲ್ಲ.

    ಪ್ರತ್ಯುತ್ತರಅಳಿಸಿ
  8. ನಿಮ್ಮ ಮನವಿ ಆರೋಗ್ಯಕರ ವಿಜಿ, ಆದರೆ ದೊಡ್ಡವರು ಅನುಭವಿಗಳು ಅದನ್ನು ಸಮರ್ಥಿಸಿಕೊಂಡಿದ್ದು ದುರದೃಷ್ಟಕರ.

    ಪ್ರತ್ಯುತ್ತರಅಳಿಸಿ