ಮಂಗಳವಾರ, ಮಾರ್ಚ್ 19, 2013

ಪಕ್ಷಾಂತರ ಮತ್ತು ಪೂಜಾಯಣ :)

ಕೃಪೆ:ಅಂತರ್ಜಾಲ
ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು. 

ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀಶ್ರೀರಾಮುಲು ಪಕ್ಷ ಸೇರ್ಕಂಡವ್ಳಂತೆ !!??

ಕೆಂಚ : ಅಯ್ಯೋ ಬುಡ್ಲಾ ಅದು ಹಳೇ ಸ್ಟೋರಿ .  ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. ನಮ್ ಕುಮಾರಣ್ಣ ಸಿಕ್ಕಿದ್ದೇ ಚಾನ್ಸು ಅಂತ ಆಯಮ್ಮನ ತಲೆ ಮ್ಯಾಲೆ ಶ್ಯಾನೆ ಹೊರೆ ಹೊರ್ಸ್ಬುಟ್ಟ ಅಂತ ಕಾಣ್ತದೆ. ಅದಕ್ಕೇ ಆವಮ್ಮ ಯಡ್ಡಿ ಬಾಸ್ ಹತ್ರ ಹೋಗಿ ನಾನು ಕೆಜೆಪಿ ಸೇರ್ಕತೀನಿ, ನನ್ ಕಾಲ್ ಶೀಟ್ ತಕ್ಕಳ್ಳಿ ಅಂದಿದ್ದೇ ತಡ  ಆವಯ್ಯ ಧನಂಜಯ್ ಕುಮಾರು ಅನಾಮತ್ತಾಗಿ ಒಂದು  ತೆಂಗಿನಕಾಯಿ ಚೀಲ ತಲೆ ಮೇಲೆ ಹೊರ್ಸಿದ್ನಂತೆ. ಅಲ್ಲಿ ಹುಲ್ಲಿನ ಹೊರೆ ಇಳ್ಸಿ ಇಲ್ಲಿಗ್ ಬಂದ್ರೆ ಇವ್ರು ತೆಂಗಿನ್ಕಾಯಿ ಹೊರಿಸ್ತಾರಲ್ಲಪ್ಪ ಅಂತ ಈಯಮ್ಮ ಬೆವರೋಕೆ ಶುರು ಆಯ್ತಂತೆ. ಆವಾಗ ಬಳ್ಳಾರಿ ಕಡೆಯಿಂದ ಬಿಸಿಲಲ್ಲೂ ತಂಗಾಳಿ ಬೀಸೋಕೆ ಶುರು ಆಯ್ತಂತೆ. ತಿರುಗಿ ನೋಡಿದ್ರೆ   ಶ್ರೀರಾಮುಲು ಜೊತೆ  ಯಾರೋ ಫ್ಯಾನ್ ಹಿಡ್ಕಂಡು ಇವಮ್ಮಂಗೆ ಗಾಳಿ (ಗಾಳ) ಹಾಕ್ತಿದ್ರಂತೆ . "ಯಾರಿವನು?" ಅಂತ ನೋಡಿದ್ರೆ ನಮ್ ಮದನ್ ಪಟೇಲು.   ಈಯಮ್ಮ ಖುಸಿ ತಡ್ಯಕಾಗ್ದೆ ಶ್ರೀರಾಮುಲುಗೆ ಜೈ ಅಂತ ಫ್ಯಾನ್ ಹಿಡ್ಕಂಡು ಜೈಕಾರ ಹಾಕೋಕೆ ಶುರು ಮಾಡಿದ್ಲಂತೆ. 

ನಾಣಿ : ಅದೆಲ್ಲ ಹೆಂಗಾರ ಇರ್ಲಿ, ಹಾಯಾಗಿ ಮಳೇಲಿ ನೆನ್ಕಂಡು, ಪಿಚ್ಚರಲ್ಲಿ  ಕುಣೀತಾ ಇರೋದ್ ಬುಟ್ಟು ಈಯಮ್ಮಂಗೆ ಯಾಕ್ಲಾ ಬೇಕಿತ್ತು ರಾಜ್ಕೀಯ ?
ಸಿಧ್ಧ :  ಪೂಜಾ ಗಾಂಧೀ ರಾಜ್ಕೀಯ ಸೇರಿದ್ದು ಯಾಕೆ ಅಂತ ನಂಗ್ ಗೊತ್ತು ಕಣ್ಲಾ. ಒಂದಿವ್ಸ ನಮ್ ಕುಮಾರಣ್ಣ ಶ್ಯಾನೆ ಬೇಜಾರಲ್ಲಿ ಕುಂತಿದ್ರಂತೆ. ಆಗ ನಮ್ ದೊಡ್ಡ ಗೌಡ್ರು "ಯಾಕ್ಲಾ ಮಗಾ ಹಿಂಗ್ ಕುಂತಿದ್ಯಾ? ನೀನು ಸದಾನಂದ ಗೌಡ್ರ ಥರ ಸದಾ ನಗ್ತಾ ಇರು ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಥರಾ ಮುಸುಡಿ ಮಾಡ್ಕಂದಿದ್ಯಲ್ಲ, ನಿಂಗ್ ಏನ್ ಬೇಕು ಕೇಳು?" ಅಂತ ಅಂದ್ರಂತೆ. ಆಗ ನಮ್ ಕುಮಾರಣ್ಣ " ಅಪ್ಪಾಜಿ ಕಾಂಗ್ರೆಸ್ ಪಾರ್ಟಿಯವರ ಹತ್ರ ಸೋನಿಯಾ ಗಾಂಧೀ, ರಾಹುಲ್ ಗಾಂಧೀ ಅವ್ರೆ, ಬಿಜೆಪಿಯವರ ಹತ್ರ ಆಯಮ್ಮ ಮೇನಕಾ ಗಾಂಧೀ, ವರುಣ್ ಗಾಂಧೀ ಅವ್ರೆ.  ಆದ್ರೆ ನಮ್ ಹತ್ರ ಯಾವ್ ಗಾಂಧೀನು ಇಲ್ಲ" ಅಂತ ಗೋಳಾಡಿದ್ರಂತೆ. ಆಗ ನಮ್ ದ್ಯಾವೇ ಗೌಡ್ರು ಒಂದ್ ನಿಮ್ಸ ನಿದ್ದೆ ಮಾಡೋ ಸ್ಟೈಲಲ್ಲಿ ಯೋಚ್ನೆ ಮಾಡಿ " ಲೇ ಮಗಾ ತಲೆ ಕೆಡಿಸ್ಕೋ ಬ್ಯಾಡ ತಗೋ ನಿಂಗೂ ಒಂದು ಗಾಂಧೀ" ಅಂತ್ಹೇಳಿ "ಕುಣಿದು ಕುಣಿದು ಬಾರೇ" ಅಂತ  ಪೂಜಾ ಗಾಂಧೀನ ಪಕ್ಷಕ್ಕೆ ಕರ್ಕಂಡ್ ಬಂದ್ರಂತೆ .

ಸೀನ : ಹೌದೇನ್ಲಾ ಸಿದ್ಧ, ಆವಮ್ಮ ರಾಜ್ಕೀಯಕ್ಕೆ ಬರೋಕೆ ಇಷ್ಟೆಲ್ಲಾ ಸೀನ್ ಐತಾ? ಆದರೂ ನಂಗೆ ಒಂದ್ ವಿಷ್ಯ ಅರ್ಥ ಆಯ್ತಿಲ್ಲ. ಈ ರಾಜಕಾರಣಿಗಳು ಯಾಕೆ ಈಪಾಟಿ ಪಕ್ಷಾಂತರ ಮಾಡ್ತಾರೆ ? ಅವರ್ಗೇನು ಮಾಡೋಕೆ ಕ್ಯಾಮೆ ಇಲ್ವಾ? ಬರೀ ಆ ಪಕ್ಷ ಬುಟ್ಟು ಈ ಪಕ್ಷ, ಈ ಪಕ್ಷ ಬುಟ್ಟು ಆ ಪಕ್ಷ ಅಂತ ಕೋತಿ ಥರ ನೆಗೀತಾ  ಇರ್ತಾರೆ. 

ಕೆಂಚ: ಲೇ ಸೀನ ಸುಮ್ಕೆ ಟೀ ಕುಡೀಲಾ , ಅಲ್ಲಾ ಆ ಕೋತಿಗಳು ಏನ್ ಮಾಡವ್ಲಾ ನಿಂಗೆ? ಸುಮ್ಕೆ ಅವಕ್ಯಾಕೆ ಅವಮಾನ ಮಾಡ್ತೀಯ. 

ಸಿಧ್ಧ :  ಕರೆಟ್ಟಾಗಿ ಹೇಳ್ದೆ ಕಣ್ಲಾ ಕೆಂಚ, ನಿಮ್ಗೆಲ್ಲಾರ್ಗೂ ಒಂದ್ ವಿಷ್ಯ ಹೇಳ್ತೀನಿ ಕರೆಟ್ಟಾಗಿ ಕೇಳಿಸ್ಕಳ್ಳಿ . ಈ ಪಕ್ಷಾಂತರ ಅಂದ್ರೆ ಏನರ್ಥ ಅಂತ ಗೊತ್ತಾ ನಿಮ್ಗೆ? ನಮ್ ವೆಂಕಟ ಸುಬ್ಬಯ್ನೋರು ಬರೆದಿರೋ  ಕನ್ನಡ ನಿಘಂಟು ತಗಂಡು ನಾನೂ ಅರ್ಥ ಹುಡುಕ್ದೆ . ಪಕ್ಷಾಂತರ ಮಾಡು ಅಂದ್ರೆ ತ್ಯಜಿಸು, ಸಿದ್ಧಾಂತವನ್ನು ತೊರೆ ಅಂತ ಅರ್ಥ. 

 ಸಿಧ್ಧ ಏನೋ ಹೊಸ ಹೊಸ ಪದಗಳನ್ನು ಹೇಳ್ತಿದ್ರೆ ನಮ್ ಕೆಂಚ,ನಾಣಿ, ಸೀನ ಎಲ್ಲಾ ಅರ್ಥ ಆಗೇ ಹೋಯ್ತು ಅನ್ನೋ ಥರ ಬಾಯ್ ಬಾಯಿ ಬಿಟ್ಕೊಂಡು ಕೇಳಿಸ್ಕೊತಾ ಇದ್ರು. ಇದನ್ನು ನೋಡಿ ನಮ್ ಸಿಧ್ಧ ಇನ್ನೂ ಉತ್ತೇಜಿತನಾಗಿ ಖುಷಿಯಿಂದ ಇನ್ನೂ ವಿವರವಾಗಿ ಹೇಳೋಕೆ ಶುರು ಮಾಡಿದ. 

                                   ಆದ್ರೆ ನಮ್ ರಾಜಕಾರಣಿಗಳು ಒಂದು ಪಕ್ಷ ತ್ಯಜಿಸೋದೆ ಇನ್ನೇನೋ ಗಳಿಸೋಕೆ . ಇನ್ನು ಸಿದ್ಧಾಂತ ತೊರೆಯೋದು ಅನ್ನೋ ಪದಕ್ಕೆ ಅರ್ಥಾನೆ ಇಲ್ಲ. ಇವ್ರಿಗೆ ಸಿದ್ಧಾಂತ ಗೊತ್ತಿದ್ರೆ ತಾನೇ ತೊರೆಯೋ ಮಾತು.ಇನ್ನೂ ಕೆಲವರು ಇನ್ನೊಂದ್ ಥರಾ ವಿಚಿತ್ರ. ಅವ್ರು ಇರೋದು ಒಂದ್ ಪಕ್ಷ ಆದ್ರೆ ಕೆಲಸ ಮಾಡೋದು ಇನ್ನೊಂದ್ ಪಕ್ಷಕ್ಕೆ. ದಗಲ್ಬಾಜಿ ರಾಜಕೀಯ ಕಣ್ಲಾ .  ಅದ್ಕೆ ನಾನು ವೆಂಕಟ ಸುಬ್ಬಯ್ನೋರನ್ನ ಕೇಳ್ಕಳ್ಳೋದು ಇಷ್ಟೇ. ದಯವಿಟ್ಟು ನಿಮ್ ನಿಘಂಟು ತಿದ್ದುಪಡಿ ಮಾಡಿ ಅಂತ. ಯಾಕಂದ್ರೆ ನಮ್ ರಾಜಕಾರಣಿಗಳ್ನ ತಿದ್ದುಪಡಿ ಮಾಡೋದು ಶ್ಯಾನೆ ಕಷ್ಟ. 
ಕೃಪೆ: ರಘುಪತಿ ಶೃಂಗೇರಿ
ಹೀಗೇ ನಮ್ ಸಿದ್ಧ ನಾನ್ ಸ್ಟಾಪ್ ಆಗಿ ಪಕ್ಷಾಂತರದ ವಿಷಯದ ಬಗ್ಗೆ ಮಾತಾಡ್ತಿದ್ರೆ  ಈ ಕಡೆ ಪಂಚಾಯ್ತಿ ಎಲೆಕ್ಷನ್ ಗೆದ್ದ ಕ್ಯಾಂಡಿಡೇಟ್ ಗಳು ಖುಷಿಯಿಂದ "ಕೈ" "ಕೈ" ಮಿಲಾಯಿಸ್ತಾ ಸ್ವೀಟ್ ಬಾಕ್ಸ್ ಹಿಡ್ಕೊಂಡು ರಾಮಣ್ಣನ  ಅಂಗಡಿ ಕಡೆಗೆ ಬಂದು ನಮ್ಗೇ ವೋಟು ಹಾಕಿ ಗೆಲ್ಸಿದ್ದಕ್ಕೆ ಇವತ್ತು ಸ್ವೀಟ್ ತಿನ್ನಿ, ಇನ್ನು ಅಸೆಂಬ್ಲಿ ಎಲೆಕ್ಷನ್ ಬರೊತಂಕ ನಿಮ್ಕಡೆ ತಿರುಗಿ ನೋಡಾಕಿಲ್ಲ ಅಂತ ಹೇಳ್ತಾ ಇದ್ರು . ಈ ಸೀನ, ಸಿದ್ಧ, ಕೆಂಚ, ನಾಣಿ ಮಾತಾಡೋ ಮಾತು ಕೇಳಿ ಅವರೆಲ್ಲಾ ನನ್ ಅಂಗಡಿ ಮುಂದೆ ಜಗಳ ಶುರು ಮಾಡಿದ್ರೆ ಕಷ್ಟ ಅಂತ ರಾಮಣ್ಣ " ಲೇ ಮಾಡೋಕೆ ಕ್ಯಾಮೆ ಇಲ್ವಾ ಮೂದೇವಿಗಳೇ ನಿಮ್ಗೆ , ಎದ್ದು ಹೋಗ್ರಲೇ ಟೀ ಕಾಸು ಕೊಟ್ಟುಬುಟ್ಟು" ಅಂದ. ಲೆಕ್ಕ ಬರಕೋ ರಾಮಣ್ಣ ಅಸೆಂಬ್ಲಿ  ಎಲೆಕ್ಷನ್ ಮುಗಿಯೋದ್ರೊಳಗೆ ನಿಂಗೆ ಕೊಡ್ಬೇಕಾಗಿರೋ  ಹಳೆಬಾಕಿ ಎಲ್ಲಾ ಫೈಸಲ್ ಮಾಡ್ತೀವಿ ಅಂತ ನಮ್ ಸಿದ್ಧ ಸೇಮ್ ರಾಜಕಾರಣಿ ಸ್ಟೈಲಲ್ಲಿ ಆಶ್ವಾಸನೆ ಕೊಟ್ಟು ಮನೆ ಕಡೆ ಹೊರಟ. 

ಶುಕ್ರವಾರ, ಮಾರ್ಚ್ 15, 2013

ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ (SONS) :)

ಚಿತ್ರ ಕೃಪೆ : ಅಂತರ್ಜಾಲ
ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ ನಾನೂ ಹೇಳ್ತೀನಿ ಕೇಳಿ .......................... ಒಂದಾನೊಂದು ಊರಿನ ಒಂದು ಕಾಲೇಜಲ್ಲಿ ನಮ್ ನಾಣಿ ಮತ್ತು ನಾಗವೇಣಿ ಇಬ್ರೂ ಓದ್ತಾ ಇದ್ರು. ಇಬ್ರೂ ಅಂದ್ರೆ ಇಬ್ರೇನಾ ಅಂತ ಕೇಳ್ಬೇಡಿ ಮತ್ತೆ  :) ನಮ್ ನಾಣಿಗೆ ನಾಗವೇಣಿ ಅಂದ್ರೆ ಪಂಚಪ್ರಾಣ. ನಾಗವೇಣಿ ಅನ್ನೋ ಹೆಸರಲ್ಲಿ ಮೊದಲಕ್ಷರ ಮತ್ತು ಕೊನೆ ಅಕ್ಷರ ಸೇರಿಸಿದ್ರೆ ನಾಣಿ ಆಗುತ್ತೆ . ಅದಕ್ಕೋ ಏನೋ ನಮ್ ಹುಡುಗನ ಹಾರ್ಟ್ ಒಳಗೆ ಈ ಹುಡುಗಿ ಸೈಟ್ ತಗೊಂಡ್ ಬಿಟ್ಳು. ನಾಗವೇಣಿ ಅನ್ನೋ ಹೆಸರಲ್ಲಿ ನಾಣಿ ಇರಬಹುದು ಆದ್ರೆ ಅವಳ ಹಾರ್ಟಲ್ಲಿ ನಾಣಿ ಇದಾನಾ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಹುಡ್ಗೀರ ಹಾರ್ಟು ಮತ್ತು ನಮ್ ದೇವೇಗೌಡರ ಪೊಲಿಟಿಕಲ್ ಪ್ಲಾನ್ಸು ಏನು ಅಂತ ಕಂಡುಹಿಡಿಯೋದು ಶ್ಯಾನೆ ಕಷ್ಟ.

                         ಹಂಗೆಲ್ಲಾ ಆಗಿ ಹಿಂಗಾದ್ಮೇಲೆ ಒಂದ್ ಒಳ್ಳೆ ದಿನ ಬಂತು. ಅದೇನೋ ಪ್ರೇಮಿಗಳ ದಿನ ಅಂತ ಮಾಡ್ತಾರಲ್ಲ ಆ ದಿನ. ಇವತ್ತು ಹೆಂಗಾದ್ರೂ ಮಾಡಿ ನನ್ ಹಾರ್ಟ್ ಓಪನ್ ಮಾಡಿ ನಾನು ನಾಗವೇಣಿನ ಎಷ್ಟು ಲವ್ ಮಾಡ್ತೀನಿ ಅಂತ ತೋರಿಸ್ತೀನಿ ಅಂತ ನಮ್ ನಾಣಿ ಅವನ ಫ್ರೆಂಡ್ಸ್ ಹತ್ರ ಹೇಳಿ ನಾಗವೇಣಿಗಾಗಿ ಕಾಯ್ತಾ ಕಾಲೇಜ್ ಗೇಟ್ ಹತ್ರ ನಿಂತ.ನಾಗವೇಣಿ ಅವತ್ತೇ ಲೇಟಾಗಿ ಬರಬೇಕಾ!!?? ಹುಡುಗರನ್ನು ಕಾಯಿಸೋದಂದ್ರೆ ಹುಡ್ಗೀರಿಗೆ ಅದೇನೋ ಆನಂದ. ಅಂತೂ ನಾಗವೇಣಿ ಬಂದ್ಳು. ನಮ್ ನಾಣಿ ಒಂದು ಗ್ರೀಟಿಂಗ್ ಕಾರ್ಡ್ ಕೈಯಲ್ಲಿ ಹಿಡ್ಕೊಂಡು ಅವಳ ಹಿಂದ್ಹಿಂದೆ ಹೊರಟ.

 ನಾಣಿ : ಹಾಯ್ ನಾಗವೇಣಿ, ಒಂದ್ನಿಮಿಷ ನಿಂತ್ಕೋ...... ನಿಂಗೆ ಒಂದ್ ವಿಷ್ಯ ಹೇಳ್ಬೇಕು
ನಾಗವೇಣಿ : ಏನೋ? ಬೇಗ ಹೇಳು ಕ್ಲಾಸ್ ಗೆ ಹೋಗ್ಬೇಕು ಟೈಮ್ ಆಯ್ತು, ನೀವಂತೂ ಹುಡುಗ್ರು ಬಂಕ್ ಹೊಡೆಯೋದೆ ಕೆಲ್ಸ ನಿಮ್ಗೆ....
ನಾಣಿ : ಇವತ್ತು ಪ್ರೇಮಿಗಳ ದಿನ, ಅದಕ್ಕೆ ನನ್ ಲವ್ ಬಗ್ಗೆ ನಿಂಗೆ ಇವತ್ತೇ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ.    I LOVE  YOU ..... ಪ್ಲೀಸ್ ನನ್ನ ಲವ್ ಮಾಡು
ನಾಗವೇಣಿ : ಏಯ್ ನಾಣಿ, ಹೆಂಗಿದೆ ಮೈಗೆ? ಇವೆಲ್ಲಾ ನನ್ ಹತ್ರ ಬೇಡ ಮರೀ...... ಇನ್ನೊಂದ್ಸಲ ನನ್ ಹಿಂದೆ ಲವ್ವು-ಗಿವ್ವು ಅಂತ ಬಂದ್ರೆ ಪ್ರಿನ್ಸಿಪಾಲ್ ಹತ್ರ ಕಂಪ್ಲೇಂಟ್ ಮಾಡ್ತೀನಿ.
ನಾಣಿ : (ಭಯದಿಂದ) ಬೇಡ ನಾಗವೇಣಿ, ಪ್ಲೀಸ್ ನಿಂಗೆ ಇಷ್ಟ ಇಲ್ಲ ಅಂದ್ರೆ ಓಕೆ. ನಾನು ನಿಂಗೆ ತೊಂದ್ರೆ ಕೊಡೋಲ್ಲ. ನಾವಿಬ್ರೂ ಫ್ರೆಂಡ್ಸ್ ಆಗಿ ಇದ್ಬಿಡೋಣ. ನನ್ ಲವ್ ಬೇಡ ಅಂದ್ಬಿಟ್ಟೆ ಆದ್ರೆ ಫ್ರೆಂಡ್ ಶಿಪ್ ಮಾತ್ರ ಬೇಡ ಅನ್ಬೇಡ ಪ್ಲೀಸ್.
ನಾಗವೇಣಿ : ಓಕೆ, ಆದ್ರೆ ಒಂದ್ ಕಂಡೀಶನ್. ಇನ್ನು ಯಾವತ್ತೂ ನನ್ನ ಲವ್ ಮಾಡ್ತೀನಿ ಅಂತ ಹಿಂದೆ ಸುತ್ತಬಾರ್ದು.
ನಾಣಿ : ಓಕೆ 

ಹೀಗೆ ಪ್ರೇಮಿಗಳ ದಿನದಂದು ನಮ್ ನಾಣಿ ಬರೀ ಪ್ರೇಮಿಯಿಂದ ಭಗ್ನಪ್ರೇಮಿಯಾಗಿ ಬದಲಾದ. ಹೀಗೇ ದಿನಗಳು ಉರುಳಿದವು.ನಮ್ ನಾಣಿ ನಾಗವೇಣಿ ಜೊತೆ ಒಳ್ಳೆ ಸ್ನೇಹಿತನಾಗಿ ಇದ್ದ.  ಅವತ್ತೊಂದಿನ ನಾಗವೇಣಿ ನಮ್ ನಾಣಿ ಹತ್ರ ಬಂದು ಟೆಕ್ಸ್ಟ್ ಬುಕ್ ಕೇಳಿ ತಗೊಂಡು ಹೋದ್ಳು. ಎರಡು ದಿನ ಬಿಟ್ಟು ಅವಳು ನಾಣಿಯ ಟೆಕ್ಸ್ಟ್ ಬುಕ್ ವಾಪಸ್ ಕೊಟ್ಳು. ಬುಕ್ ವಾಪಸ್ ಕೊಡುವಾಗ ಅದರೊಳಗೆ ಒಂದು ಲೆಟರ್ ಬರೆದಿಟ್ಟು ಕೊಟ್ಟಳು. ಆದ್ರೆ ಆ ಲೆಟರ್ ಬಗ್ಗೆ ನಾಣಿಗೆ ಏನೂ ಹೇಳಲಿಲ್ಲ. ಹೌದು ಅದು ಬರೀ ಲೆಟರ್ ಅಲ್ಲ ..... ಲವ್ ಲೆಟರ್ ......... ನಮ್ ನಾಣಿಗಾಗಿ ನಾಗವೇಣಿ ಬರೆದ ಲವ್ ಲೆಟರ್ .......... " ನಲ್ಮೆಯ ನಾಣಿ, ನೀನು ಅವತ್ತು ಪ್ರೇಮಿಗಳ ದಿನ ನನ್ ಹತ್ರ ಬಂದು ಪ್ರಪೋಸ್ ಮಾಡಿದಾಗ ನಂಗೆ ಸಖತ್ ಖುಷಿ ಆಯ್ತು. ಆದ್ರೆ ನಿಂಗೆ ಸ್ವಲ್ಪ ಸತಾಯಿಸಿ, ಕಾಯಿಸಿ ಆಮೇಲೆ ನನ್ ಲವ್ ಬಗ್ಗೆ ನಿಂಗೆ ಹೇಳೋಣ ಅಂತ ಸುಮ್ನೆ ಡ್ರಾಮಾ ಮಾಡಿದೆ. ನಿಜ ಹೇಳ್ತೀನಿ ನೀನಂದ್ರೆ ನಂಗೂ ಸಖತ್ ಇಷ್ಟ ಕಣೋ, ಪ್ಲೀಸ್ ಲವ್ ಮೀ" ಹೀಗಂತ ಬರೆದು ಆ ಬುಕ್ ಒಳಗಿಟ್ಟು ಲೆಟರ್ ಕೊಟ್ಟು ಇದನ್ನು ನೋಡಿದ್ಮೇಲೆ ಅವನ ರೀ ಆಕ್ಷನ್ ಹೇಗಿರುತ್ತೆ ಅಂತ ಕಲ್ಪನೆ ಮಾಡ್ತಾ ಮನೆಗೆ ಹೋದ್ಳು. ಮಾರನೇ ದಿನ ಆಯ್ತು, ತಿಂಗಳು ಕಳೀತು ........... ನಮ್ ನಾಣಿಯಿಂದ ನೋ ರೀ ಆಕ್ಷನ್. ಅವ್ನು ನಾಗವೇಣಿ ಜೊತೆ ಮಾಮೂಲಾಗಿ ಫ್ರೆಂಡ್ ಥರಾನೇ ಇದ್ದ.

ಇದೆಲ್ಲಾ ಆಗಿ ವರ್ಷಗಳು ಕಳೆದವು. ನಾಗವೇಣಿ ಕಾಲೇಜ್ ಮುಗಿಸಿ ಅಪ್ಪ ತೋರಿಸಿದ ಫಾರಿನ್ ಹುಡುಗನ ಜೊತೆ ಮದುವೆ ಮಾಡ್ಕೊಂಡು ಅಮೆರಿಕಾಗೆ ಹಾರಿ ಹೋದ್ಳು. ಆದ್ರೆ ನಮ್ ನಾಣಿ ಅವಳದೇ ನೆನಪಲ್ಲಿ ಇವತ್ತಿಗೂ ಮದುವೆ ಆಗ್ದೇ ದೇವದಾಸ್ ಥರ ಗಡ್ಡ ಬಿಟ್ಕೊಂಡು ತಿರುಗ್ತಾ ಇದ್ದಾನೆ.


ಈ  ಕಥೆಯ  ನೀತಿ ಏನಪ್ಪಾಅಂದ್ರೆ ----------------------------------------------------------------------------------------------------------------..........................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................
-----------------------------------------------------------------------------------------------------------------
ಹುಡುಗರು ಟೆಕ್ಸ್ಟ್ ಬುಕ್ ತೆಗೆದು ನೋಡೋಲ್ಲಾ :) :) :) :) 

ಭಾನುವಾರ, ಮಾರ್ಚ್ 10, 2013

ಮರಳಿ ಬಾ ಅರಳಿ ಬಾ .............

ನಲ್ಲೆ ನಿನ್ನ ಹುಸಿಕೋಪ ಇನ್ನೆಷ್ಟು ದಿನ
ಮನ್ನಿಸಿ ನನ್ನೆಲ್ಲ ತಪ್ಪುಗಳ ಪ್ರೀತಿಸೆನ್ನ

ಅಂದು ನೀ ನನ್ನೊಂದಿಗೆ ಇಟ್ಟ ಪ್ರತಿಹೆಜ್ಜೆ ಗುರುತು
ಎದೆಯಲ್ಲಿ ಅಚ್ಚೊತ್ತಿದೆ, ಹೇಗೆ ಬದುಕಲಿ ಮರೆತು ?

ನಿನಗೆ ಕೊಟ್ಟ ಮಾತುಗಳ ನಾ ಉಳಿಸಿಕೊಳ್ಳಲಿಲ್ಲ
ನಿನಗಾದ ಅಗಾಧ ನೋವಿನ ಅರಿವೆನಗಿಲ್ಲದಿಲ್ಲ

ಪರಿಸ್ಥಿತಿಗಳ ಪಿತೂರಿಯ ಬಲಿಪಶುವು ನಾನು
ಆದರೂ ನೀನಿರದೆ ಇರಲಾರೆ ಇನ್ನು

ನೀನೆನ್ನ ಒಡನಾಡಿ,  ಬದುಕಬೇಕಿದೆ ಒಡಗೂಡಿ
ಓಡದಿರು ನೀನೆಂದು  ಹೃದಯದಿಂದೆನ್ನ ಹೊರದೂಡಿ

ನಿನ್ನದೇ ನೆನಪುಗಳ ಮೆರವಣಿಗೆ ನನ್ನೆದೆಯ ಒಳಗೆ
ಬಂದೆನ್ನ ಬಂಧಿಸಿ  ತೀರಿಸು ವಿರಹದ ಬೇಗೆ