ಬುಧವಾರ, ಜೂನ್ 15, 2011

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

ಪ್ರಿಯ ಗೆಳೆಯರೇ, 

                     "ರಾಬಿನ್ ಚುಗ್", ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
                   
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  "ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು" ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು. 
                      
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 'ಬೆಂಗಳೂರ್ ಮಿರರ್' ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ "F**K OFF" ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ.http://www.bangaloremirror.com
/index.aspx?page=article&sectid=10&contentid=201106072011060

               ಹೀಗೆ ಕೀಳುದರ್ಜೆಯ ಪ್ರತಿಕ್ರಿಯೆಯೊಂದನ್ನು ನೀಡಿದ ರಾಬಿನ್ ತನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದಲೇ ಉಗಿಸಿಕೊಂಡಿದ್ದಾನಾದರೂ ಆ ಪ್ರತಿಕ್ರಿಯೆಯನ್ನು ಅಥವಾ ಪೋಸ್ಟ್ ಅನ್ನು ತೆಗೆದುಹಾಕಿರಲಿಲ್ಲ. ನಂತರದಲ್ಲಿ ಬಂದ ವ್ಯಾಪಕ ಟೀಕೆ ಹಾಗೂ ಬೆದರಿಕೆಗಳಿಗೆ ತಲೆಬಾಗಿ ಕೊನೆಗೆ ಆ ಪೋಸ್ಟನ್ನು ತೆಗೆದ ಹಾಗೂ ಕ್ಷಮೆಯಾಚಿಸಿದ. ಇಷ್ಟರ ವೇಳೆಗೆ ಆತನ ಕಚೇರಿಯ ವಿಳಾಸ, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ ಎಲ್ಲೆಡೆ ಹರಡಿತ್ತು. ನನಗೂ ಸಹ ಗೆಳೆಯ ಸಾಗರ್ ರಾಜ್ ಮುಖಾಂತರ ಆತನ ಮೊಬೈಲ್ ನಂಬರ್ ಸಿಕ್ಕಿತು. ಇಷ್ಟರಲ್ಲಾಗಲೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿರಬಹುದು ಎಂದುಕೊಂಡೇ ಕರೆ ಮಾಡಿದೆ. ಎರಡು ರಿಂಗ್ ಆದಮೇಲೆ ಫೋನ್ ತೆಗೆದ. ನಾನು ಅವನಿಗೆ ಮೊದಲು ಕೇಳಿದ ಪ್ರಶ್ನೆ "ನಿನಗೆ ಕನ್ನಡ ಬರುತ್ತಾ? ಅದಕ್ಕವನು ಸ್ವಲ್ಪ ಸ್ವಲ್ಪ ಗೊತ್ತು ಅಂತ ಹೇಳಿದ. ಕನ್ನಡ ನಾಡಿಗೆ ಬಂದು, ಕನ್ನಡದ ಜನರ ಮಧ್ಯೆ ಇದ್ದು, ಕನ್ನಡಿಗರ ಅನ್ನ ತಿಂದು ಇಲ್ಲಿನ ನೀರು ಕುಡಿದು ಜೀವನ ಸಾಗಿಸುತ್ತಿರುವ ನೀನು ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಹೀಗೆ ಹೀನ ಪದ ಪ್ರಯೋಗ ಮಾಡಿದ್ದು ಎಷ್ಟು ಸರಿ ಎಂದು ದಬಾಯಿಸಿದೆ. ಅದಕ್ಕವನು " ಇಲ್ಲ ಸರ್, ನನ್ನ ಉದ್ದೇಶ ಆ ಶಿಫಾರಸ್ಸನ್ನು ವಿರೋಧಿಸುವುದಷ್ಟೇ ಆಗಿತ್ತು, ಆದರೆ ನಾನು ಬಳಸಿದ ಶಬ್ದದ ಬಗ್ಗೆ ನನಗೆ ಪಶ್ಚಾತ್ತಾಪ ಇದೆ" ಎಂದ. 

                  ಕನ್ನಡಿಗರು ಉದಾರ ಹೃದಯಿಗಳು. ಇದು ನಮ್ಮ ವಿಶೇಷತೆಯೂ ಹೌದು ಜೊತೆಗೇ ವೀಕ್ನೆಸ್ ಕೂಡಾ. ನಾವು ಕನ್ನಡಿಗರು ಅಂಗಡಿಗೆ ಬಂದ ವಲಸಿಗ ಗಿರಾಕಿಯನ್ನು ಅವರದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷಿನಲ್ಲಿ ಮಾತಾಡಿಸುತ್ತೇವೆ. ವಿಳಾಸ ಹುಡುಕುತ್ತಾ ಬಂದ ಹೊರಗಿನವರಿಗೆ ಅವರದೇ ಭಾಷೆಯಲ್ಲಿ ಅಡ್ರೆಸ್ ಹೇಳುತ್ತೇವೆ. ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತೇವೆ. ಅವರ ಅನುಕೂಲಕ್ಕಾಗಿ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತೇವೆ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸುವ ನಿನ್ನಂತಹ ಮಂದಿ ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ದಬಾಯಿಸಿದೆ. ಮತ್ತೊಮ್ಮೆ ತನ್ನ ತಪ್ಪಿಗಾಗಿ ಕ್ಷಮೆ ಕೇಳಿದ ಆತ ಇನ್ನೆಂದೂ ತಾನು ಈ ರೀತಿ ವರ್ತಿಸುವುದಿಲ್ಲ ಎಂದು ಅಲವತ್ತುಕೊಂಡ. ನಿನಗೆ ಆಸಕ್ತಿಯಿದ್ದಲ್ಲಿ ನಾನು ನಿನಗೆ ಕನ್ನಡ ಕಳಿಸಿಕೊಡುತ್ತೇನೆ ಎಂದು ಆತನಿಗೆ ಹೇಳಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆತ ಕನ್ನಡ ಕಲಿಯಬೇಕೆಂಬ ಆಸೆ ತನಗೂ ಇದೆ ಎಂದು ಹೇಳಿದ. ಮತ್ತೇಕೆ ನೀನು ಆ ಶಿಫಾರಸ್ಸನ್ನು ವಿರೋಧಿಸಿದೆ ಎಂದು ಕೇಳಿದೆ.   
ಅದಕ್ಕೆ ಆತನ ಪ್ರತಿಕ್ರಿಯೆ ಹೀಗಿತ್ತು " ನಾನು ಕಳೆದ ೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನ್ನ ಅವಶ್ಯಕತೆಗೆ ತಕ್ಕಷ್ಟು ಮಟ್ಟಿಗಿನ ಕನ್ನಡ ಕಲಿತಿದ್ದೇನೆ.ಇದನ್ನು ನಾನು ನನ್ನ ಅವಶ್ಯಕತೆಗಾಗಿ ಕಲಿತಿದ್ದೇನೆ ಹೊರತು ಯಾರದೇ ಒತ್ತಾಯಕ್ಕಲ್ಲ. ಯಾರಾದರೂ ನನ್ನ ಬೆನ್ನ ಹಿಂದೆ ನಿಂತು ಲಾಠಿ ಹಿಡಿದು ಕನ್ನಡ ಕಲಿ ಎಂದಿದ್ದರೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕೆಂಬುದನ್ನು, ಏಳನೇ ತರಗತಿಯ ತತ್ಸಮಾನ ಕನ್ನಡ ಪರೀಕ್ಷೆ ಪಾಸು ಮಾಡಬೇಕು ಎಂಬುದನ್ನು ನಾನು ವಿರೋಧಿಸಿದೆ." 

                ರಾಬಿನ್ ಹೇಳಿದ ಈ ಮಾತುಗಳನ್ನು ಕೇಳಿದ ನಂತರ ಈತನ ಮಾತುಗಳಲ್ಲೂ ಸತ್ಯವಿದೆ ಎನ್ನಿಸಿತು. ಕರ್ನಾಟಕಕ್ಕೆ ಉದ್ಯೋಗ ಅರಸಿ, ಬದುಕು ಕಟ್ಟಿಕೊಳ್ಳಲು ಬಂದಿರುವ ಜನರಲ್ಲಿ ಕೇವಲ ವಿದ್ಯಾವಂತರು, ಅಕ್ಷರಸ್ಥರೆ ಇಲ್ಲ. ಅನಕ್ಷರಸ್ಥರು, ಅವಿದ್ಯಾವಂತರೂ ಇದ್ದಾರೆ. ಅವರುಗಳು ಏನು ಮಾಡಬೇಕು? ಹೊರರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರಿಗೂ ಆಯಾ ರಾಜ್ಯಗಳ ಸರ್ಕಾರ ಇಂತಹುದೇ ಕಾನೂನು ಜಾರಿಗೆ ತಂದರೆ ನಾವು ಒಪ್ಪುವುದು ಸಾಧ್ಯವೇ? ಎಂದು ನನ್ನ ಮನಸ್ಸು ಕೇಳುತ್ತಿತ್ತು. ಆದರೆ ರಾಬಿನ್ ಪ್ರತಿಕ್ರಿಯಿಸಲು ಉಪಯೋಗಿಸಿದ ಭಾಷೆಗೆ ನನ್ನ ವಿರೋಧ ಇದ್ದೇ ಇದೆ. ಆದಕ್ಕೆ ನಾನು ಅವನಿಗೊಂದು ಸಲಹೆ ನೀಡಿದೆ. ನಿನಗೆ ಬರುವ ಎಲ್ಲಾ ಮೊಬೈಲ್ ಕರೆಗಳನ್ನೂ ಸ್ವೀಕರಿಸಬೇಕು, ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು, ಎಲ್ಲಾ ಕರೆಗಳು, ಮಿಂಚಂಚೆಗಳಿಗೂ ಉತ್ತರಿಸಬೇಕು, ಎಲ್ಲರಲ್ಲಿ ಕ್ಷಮಾಪಣೆ ಕೇಳಬೇಕು.....ಇದೇ ನಿನ್ನ ತಪ್ಪಿಗೆ ಶಿಕ್ಷೆ ಎಂದು ಭಾವಿಸು ಎಂದೆ. ನನ್ನ ಮಾತನ್ನು ಒಪ್ಪಿದ ಅವನು ಈಗಾಗಲೇ ಅದೇ ರೀತಿಯಲ್ಲಿ ವರ್ತಿಸುತ್ತಿದ್ದು ಲಿಖಿತರೂಪದಲ್ಲಿ ಕೂಡಾ ಕ್ಷಮೆ ಯಾಚಿಸಿದ್ದಾನೆ. "ಪಶ್ಚಾತಾಪಕ್ಕಿಂಥ ದೊಡ್ಡ ಶಿಕ್ಷೆ ಮತ್ತೊಂದಿಲ್ಲ" ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿ ನನ್ನೆಲ್ಲಾ ಸಹೃದಯೀ ಮಿತ್ರರಲ್ಲಿ ನನ್ನ ಮನವಿ ಏನೆಂದರೆ ಈ ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸೋಣ. 
                     
                ಕನ್ನಡ ನಾಡನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಅವಹೇಳನಕಾರಿ ಮಾತನ್ನಾಡಿದ ಅದೇ ವ್ಯಕ್ತಿಗೆ ಕನ್ನಡ ಕಲಿಸಿ ಕನ್ನಡ ನಾಡಿನ ಬಗ್ಗೆ ಹೆಮ್ಮೆಯ ಮಾತಾಡುವಂತೆ ಮಾಡುವ ಬಯಕೆ ಇದೆ. ನಿಮ್ಮ ಸಹಕಾರ, ಬೆಂಬಲ ಇರಲಿ. 



                 ವಿವಾದಕ್ಕೆ ಕಾರಣವಾದ ಪೋಸ್ಟ್ 
                                                                                                                               ಕ್ಷಮಾಪಣಾ ಪತ್ರ 
    

ಗುರುವಾರ, ಜೂನ್ 9, 2011

ಎತ್ತ ಸಾಗಿದೆ ಪ್ರಜಾಪ್ರಭುತ್ವ !!!???

                      ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.
                                         ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
                               ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ.

                   ದೇಶದ ಇಂಥ ಸ್ಥಿತಿಗೆ ಕಾರಣವೇನು ಎಂದು ಯೋಚಿಸಿದರೆ ಅದು ಸುತ್ತಿ ಬಳಸಿ ನಮ್ಮತ್ತಲೇ ಬೊಟ್ಟು ಮಾಡಿ ತೋರಿಸುತ್ತದೆ.  ಹಿರಿಯ ನ್ಯಾಯವಾದಿಗಳಾದ  ಎ.ಜಿ. ನೂರಾನಿ ಅವರು " Its an illusion that India is a multi-party democracy. There is really only one party" ಎಂದು ಒಂದೆರಡು ವರ್ಷದ ಹಿಂದೆ ತಮ್ಮ ಲೇಖನವೊಂದರಲ್ಲಿ ಹೇಳಿದ್ದರು  ಇಂದಿನ ಪರಿಸ್ಥಿತಿಗೆ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.                              ಹೌದು, ನಾವು ಭ್ರಮೆಯಲ್ಲಿದ್ದೇವೆ. ಇಲ್ಲಿ ಇರುವುದು ಒಂದೇ ಪಕ್ಷ. ಇಲ್ಲಿ ಆಡಳಿತ ಪಕ್ಷ ಏನು ಮಾಡುತ್ತದೋ, ಏನು ಹೇಳುತ್ತದೋ ಅದೇ ಸರಿ. ವಿರೋಧಪಕ್ಷ ಹೆಸರಿಗೆ ಮಾತ್ರ ಇದೆ. ಅದಕ್ಕೆ ಕವಡೆ ಕಿಮ್ಮತ್ತಿಲ್ಲ. 
                      ಉದಾಹರಣೆಗೆ, ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಪ್ಪುಹಣದ ವಿಷಯವನ್ನೇ ತೆಗೆದುಕೊಂಡರೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಭಾಜಪ " ಕಪ್ಪುಹಣವನ್ನು ಕೂಡಲೇ ವಾಪಸ್ ತನ್ನಿ " ಎಂದರೆ " ನೀವು ಆಡಳಿತದಲ್ಲಿದ್ದಾಗ ಏಕೆ ಕಪ್ಪುಹಣವನ್ನು ವಾಪಸ್ ತರಲಿಲ್ಲ, ಈಗೇಕೆ ಬೊಬ್ಬೆ ಹಾಕುತ್ತೀರಿ" ಎಂದು ಕೇಂದ್ರ ಸರ್ಕಾರವು 'ಭಾಜಪ'ದ  ಬಾಯಿ ಮುಚ್ಚಿಸುತ್ತದೆ. ಇನ್ನು ರಾಜ್ಯಸರ್ಕಾರದ ವಿಷಯಕ್ಕೆ ಬಂದರೆ ಭೂಹಗರಣ, ಗಣಿಹಗರಣ ಇನ್ನಿತರ ಯಾವುದೇ ವಿಷಯ ಚರ್ಚೆಗೆ ಬಂದರೂ ವಿರೋಧ ಪಕ್ಷಗಳ ಮೇಲೆ ಹರಿಹಾಯುವ ನಮ್ಮ ಮುಖ್ಯಮಂತ್ರಿಗಳು "ನಿಮ್ಮ ಆಡಳಿತದ ಅವಧಿಯಲ್ಲಿ ನೀವು ಮಾಡಿದ್ದೇನು? ನೀವು ಲೂಟಿ ಮಾಡಿಲ್ಲವೇ, ನಾವು ಮಾಡಿದರೆ ತಪ್ಪೇನು? "ಎಂಬ ಧೋರಣೆಯ ಹೇಳಿಕೆ ನೀಡುತ್ತಾರೆ.
                               ಇವೆಲ್ಲವನ್ನೂ ನೋಡಿದಾಗ ಒಮ್ಮೊಮ್ಮೆ ಮನಸ್ಸಿಗೆ ಆಘಾತವಾಗುತ್ತದೆ. ನಾವು ಮತದಾರರು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಏಳುತ್ತದೆ.
ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ಪಕ್ಷಗಳ ಪ್ರಣಾಳಿಕೆಗಳು ವಿಭಿನ್ನವಾಗಿರುತ್ತವೆ ಹೊರತು ಆಡಳಿತದಲ್ಲಿ ಅಂತಹದ್ದೇನೂ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಸರ್ಕಾರಗಳು ಕೈಗೊಂಡ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಹೊಸ ಹೆಸರು ನೀಡಿ     " ಹೊಸ ಬಾಟಲಿಯಲ್ಲಿ ಹಳೆಯ ಮದ್ಯ" ಎಂಬಂತೆ ಆಡಳಿತ ನಡೆಸುತ್ತಾರೆ.   
ಕೆಟ್ಟದ್ದಕ್ಕೆಲ್ಲಾ ಹಿಂದಿನ ಸರ್ಕಾರವನ್ನು ದೂಷಿಸುತ್ತಾ,ಒಳ್ಳೆಯದ್ದಕ್ಕೆಲ್ಲಾ ತಮ್ಮಿಂದಲೇ ಆದದ್ದು ಎಂದು ಬೀಗುತ್ತಾ, ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಾ ಇದನ್ನೇ 'ಆಡಳಿತ' ಎಂದು ತಿಳಿದಿರುವುದು ಇಂದಿನ ರಾಜಕಾರಣಿಗಳ ಬೌದ್ದಿಕ ದಾರಿದ್ರ್ಯದ ಪರಮಾವಧಿ ಎನ್ನದೆ ವಿಧಿಯಿಲ್ಲ. 

                     ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿಯೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿ ಸಾರ್ವಜನಿಕ ಚರ್ಚೆಗಳಾಗಬೇಕಿದೆ. ಈ ಪದ್ಧತಿ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿದ್ದು ಇಲ್ಲಿಯೂ ಇಂತಹ ಚರ್ಚೆ ನಡೆದರೆ ಮತದಾರನನ್ನು ಜಾಗೃತನಾಗಿಸಲು ನೆರವಾಗುತ್ತದೆ.