ಸೋಮವಾರ, ಮೇ 16, 2011

ಬಲಾಬಲ

ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.




ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.



ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
                            ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.



ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.



ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ.....ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,

ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ....ನೋಡಿ ಆನಂದಿಸೋಣ



ಕೊನೆಗೂ ಹತ್ತು ಮಂದಿ

ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ

ಪ್ರಶ್ನೆಯೊಂದು ಹಾಗೇ ಉಳಿದಿದೆ

ನಮ್ಮ ಜನರಿಗೆ ಬುದ್ಧಿ ಬಂದೀತೇ !!??

4 ಕಾಮೆಂಟ್‌ಗಳು:

  1. ನಿಮ್ಮ ಮಾತು ಅಕ್ಷರಶಃ ಸತ್ಯ...ಜನ ಮತ್ತೆ ಅವರಿಗೆ ಮತ ಹಾಕುವುದನ್ನು ನೋಡಿದರೆ ಅರ್ಥವಾಗುತ್ತದೆ...ನಮ್ಮ ಜನರಿಗೆ ಬೇಕಾಗಿರುವುದು ಒಳ್ಳೆ ಸರ್ಕಾರವಲ್ಲ..ಬದಲಾಗಿ ಹಣ,ಹೆಂಡ ಅಂತ..

    ಪ್ರತ್ಯುತ್ತರಅಳಿಸಿ
  2. ಪ್ರಸ್ತುತ ರಾಜ್ಯ ರಾಜಕೀಯದ ಬಗೆಗೆ ತುಂಬಾ ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದೀರಿ, ದೇಶದ ನಾಗರಿಕರು ಎಚ್ಚೆತ್ತುಕೊಂಡಿದ್ದಾರೋ ಇಲ್ವೋ ಗೊತ್ತಿಲ್ಲ ಆಯ್ಕೆ ಮಾಡೋವಾಗ ಮಾತ್ರ ಸಭ್ಯ ನಾಗರೀಕ ಮಾತ್ರ ಸಂದಿಗ್ದತೆಯ ವಾತವರಣದಲ್ಲಿ ವಿಲವಿಲ ಒದ್ದಾಡುವುದಂತು ಸತ್ಯ ಇರುವ ಮೂವರು ಖದೀಮರಲ್ಲಿ (ಮೂವರ ಚಿತ್ರ ಕಣ್ಣ ಮುಂದಿದೆ) ಯಾರ ಮುಖದ ಮೇಲೆ ಟಸ್ಸೇ ಒತ್ತಬೇಕು ಅನ್ನೋದರ ಕಳವಳದಲ್ಲಿ. ಮುಕ್ತಿ ಎಂದೋ?

    ಪ್ರತ್ಯುತ್ತರಅಳಿಸಿ
  3. Kole Basava,ತಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ವಿಪರ್ಯಾಸದ ವಿಷಯವೇನೆಂದರೆ ಯಡಿಯೂರಪ್ಪನವರ ಭ್ರಷ್ಟ ಆಡಳಿತವನ್ನು ವಿರೋಧಿಸಬೇಕಾದ ವಿರೋಧಪಕ್ಷಗಳು ನರಸತ್ತಂತೆ ಮಲಗಿವೆ. ರಾಜ್ಯಪಾಲರಿಗೆ ಸರ್ಕಾರವನ್ನು ಎಲ್ಲೆಂದರಲ್ಲಿ ಟೀಕೆ ಮಾಡುವುದೇ ಕೆಲಸವಾಗಿದೆ. ಇನ್ನು ಬಿಜೆಪಿಗೆ ಬುದ್ಧಿ ಕಲಿಸಬೇಕಾದ ಮತದಾರ ಎಲ್ಲಾ ಉಪಚುನಾವಣೆಗಳಲ್ಲೂ ಬಿಜೆಪಿಯನ್ನೇ ಗೆಲ್ಲಿಸಿ ರಾಜ್ಯವನ್ನು ಮತ್ತಷ್ಟು ದೋಚಲು ಹುಮ್ಮಸ್ಸು ನೀಡುತ್ತಿದ್ದಾನೆ. ಭ್ರಷ್ಟಾಚಾರದ ವಿಷಯದಲ್ಲಿ ಎಲ್ಲ ಪಕ್ಷಗಳದ್ದು ಒಂದೇ ಸಿದ್ದಾಂತ……”ಅಧಿಕಾರ ದಕ್ಕಿದೆ ಸಿಕ್ಕಿದಷ್ಟು ಬಾಚಿಕೋ”. ನೆನಪಾಗುವುದು ಒಂದೇ ಹಾಡು “ಎಂದು ಆದೇವು ನಾವು ಮುಕ್ತ ಮುಕ್ತ….ಮುಕ್ತ”

    ಪ್ರತ್ಯುತ್ತರಅಳಿಸಿ